ಚಿಕ್ಕಮಗಳೂರು: ಸಾಧಕರಿಗೆ ಅಂತಿದ್ದರೆ ಎಂತಹುದೇ ಕಷ್ಟ ಇರಲಿ, ಹೊಸದಾಗಿ ಇನ್ನೂ ಕಷ್ಟಗಳು ಬರಲಿ, ಎದುಗುಂದುವ ಮಾತೇ ಇಲ್ಲ! ಈ ಮಾತಿಗೆ ಅಕ್ಷರಶಃ ಉದಾಹರಣೆ ಚಿಕ್ಕಮಗಳೂರು ಜಿಲ್ಲೆಯ (Chikkamagaluru) ಕಳಸ ತಾಲೂಕಿನ ಮರಸಣಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಲಿಕಾರ್ಮಿಕರ ಮಗಳು ಅಮುದಾ! ಹೌದು, ಅಮುದಾ ಎಂಬ ಚಿಕ್ಕಮಗಳೂರಿನ ಕಳಸದ (Kalasa) ಈ ಯುವತಿಯ ಸಾಧನೆಗೆ ಎಲ್ಲರೂ ನಿಬ್ಬೆರಗಾಗುತ್ತಿದ್ದಾರೆ. ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲೂ ಅಂತಿಮ ಪದವಿಯಲ್ಲಿ ಚಿನ್ನದ ಪದಕವನ್ನು ಅಮುದಾ ಮುಡಿಗೇರಿಸಿಕೊಂಡಿದ್ದಾಳೆ. ತನ್ನ ಶ್ರಮದ ಸಾರ್ಥಕತೆಯಾಗಿ ಒಲಿದುಬಂದ ಚಿನ್ನದ ಪದಕವನ್ನು ಇದೇ ಜೂನ್ 16ರಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ (Kuvempu University) ನಡೆಯಲಿರುವ 32ನೆ ಘಟಿಕೋತ್ಸವದಲ್ಲಿ ಅಮುದಾ ಕೊರಳಿಗೆ ಏರಿಸಿಕೊಳ್ಳಲಿದ್ದಾಳೆ.
ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೊಟ್ಟೆಪಾಡಿಗಾಗಿ ಅಪ್ಪ ಅಮ್ಮ ಇಬ್ಬರೂ ಸಮೀಪದ ಎಸ್ಟೇಟ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಾರೆ. ಹಾಗೂ ಹೀಗೂ ಜೀವನ ಮುಂದೂಡಲು ಸಾಲುವಷ್ಟು ಹಣ ಮಾತ್ರ ಹುಟ್ಟುತ್ತೆ. ಮನೆಯಲ್ಲಿನ ಇಂತಹ ಪರಿಸ್ಥಿತಿ ಅಮುದಾ ಅವರನ್ನು ಶಿಕ್ಷಣದಿಂದ ದೂರವಿರಿಸಲು ಎಷ್ಟೇ ಪ್ರಯತ್ನಿಸಿದರೂ ಅಮುದಾ ಮಾತ್ರ ಜಗ್ಗಲಿಲ್ಲ, ಕುಗ್ಗಲಿಲ್ಲ.
ಪದವಿಯಲ್ಲಿ ಕೇವಲ ಉತ್ತೀರ್ಣವೊಂದೇ ಆಗಿಲ್ಲ!
ಕಳಸ ಪಟ್ಟಣದ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಓದಿ ಇದೀಗ ಅಂತಿಮ ವರ್ಷದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಗಮನಿಸಿ, ಕೇವಲ ಪದವಿ ಉತ್ತೀರ್ಣವಾಗಿಲ್ಲ, ಚಿನ್ನದ ಪದಕ ಪಡೆದು ಪದವಿ ಗಳಿಸಿದ್ದಾರೆ ಅಮುದಾ.
ಇನ್ನಿಬ್ಬರು ಮಕ್ಕಳಿಗೂ ಶಿಕ್ಷಣ ಇಲ್ಲ ಆದರೆ ಇಷ್ಟು ಕಷ್ಟಪಟ್ಟು ಓದಿ ಸಾಧನೆ ಮಾಡಿದ ಅಮುದಾಗೆ ಮತ್ತೊಂದು ಕಷ್ಟ ಎದುರಾಗಿದೆ. ಅದೇ ಮನೆಯ ಬಡತನ. ಅಮುದಾಗೆ ಇಬ್ಬರು ಸಹೋದರರು. ಇಬ್ಬರೂ ಆರ್ಥಿಕ ಮುಗ್ಗಟ್ಟಿನಿಂದ ಬೆಂಗಳೂರಿನಲ್ಲಿ ಖಾಸಗಿ ಸಮಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮುದಾ ತಂದೆ ಉದಯ್ ಕುಮಾರ್ ಮತ್ತು ಮಹಾಲಕ್ಷ್ಮಿ ಅವರಿಗೆ ಎಲ್ಲ ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂಬ ಅದಮ್ಯ ಆಸೆಯೇನೋ ಇತ್ತು. ಆದರೆ ಗಂಡು ಮಕ್ಕಳಿಗಂತೂ ಶಿಕ್ಷಣ ಕೊಡಿಸಲಾಗಲಿಲ್ಲ.
ಎದುರಾಗಿದೆ ಇನ್ನೊಂದು ಸಂಕಷ್ಟ ಅಮುದಾ ಇಷ್ಟೆಲ್ಲ ಕಷ್ಟಗಳ ನಡುವೆಯೂ ಪದವಿ ಗಳಿಸಿ, ಅದೂ ಚಿನ್ನದ ಪದಕ ಗಳಿಸಿದ್ದಾಳೆ. ಆದರೆ ಆರ್ಥಿಕ ಮುಗ್ಗಟ್ಟಿನಿಂದ ಮಗಳನ್ನೂ ಬೆಂಗಳೂರಿನಲ್ಲಿ ಗಾರ್ಮೆಂಟ್ ಕಲಸಕ್ಕೆ ಕಳಿಸುತ್ತೇವೆ ಅಂತಿದ್ದಾರೆ ಉದಯ್ ಕುಮಾರ್ ಮತ್ತು ಮಹಾಲಕ್ಷ್ಮೀ ದಂಪತಿ.
ಪದವಿಯ ನಂತರ ಉನ್ನತ ವ್ಯಾಸಂಗ ಮಾಡುವ ಕನಸೇನೋ ಇದೆ. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಹೆಚ್ಚಿನ ಓದಿಗೆ ಸಾಥ್ ಕೊಡುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಅಮುದಾ. ಸದ್ಯ ಪತ್ರಿಕೋದ್ಯಮ ಪದವಿಯಲ್ಲಿ ಚಿನ್ನದ ಪದಕ ಗಳಿಸಿಯೂ ಬೆಂಗಳೂರಿಗೆ ಗಾರ್ಮೆಂಟ್ ಕೆಲಸಕ್ಕೆ ಹೊರಟು ನಿಂತಿರುವ ಅಮುದಾ ಅವರ ಕಷ್ಟವನ್ನು ನಾವೂ ಕೊಂಚ ಕೊಂಚ ಹಂಚಿಕೊಂಡರೆ ಅವರ ಸಮಸ್ಯೆ ಇಲ್ಲವಾಗಬಹುದು. ಅಮುದಾ ಉನ್ನತ ವ್ಯಾಸಂಗ ಮಾಡಲು ಸಾಧ್ಯವಾಗಬಹುದು. ಸದ್ಯ ಸಹೃದಯ ಸಜ್ಜನರ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ ಅಮುದಾ. ಆ ಸಹೃದಯಿ ಸಜ್ಜನರ ಪೈಕಿ ನೀವು ಒಬ್ಬರಾಗಬಹುದೇ?
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ