ಚಾಮರಾಜನಗರ: ಕಸ ಅಂತ ಎಸೆಯುವ ಬದಲು, ಅದನ್ನೇ ರಸವನ್ನಾಗಿ ಪರಿವರ್ತಿಸಿದರೆ ಏನಾಗುತ್ತೆ? ಇವರಂತೆ ಸಕ್ಸಸ್ ಸಿಗುತ್ತೆ! ಹೌದು, ಚಾಮರಾಜನಗರದ (Chamarajanagar News) ಮಹಿಳೆಯೊಬ್ಬರು ಕಸದಿಂದ ರಸ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ರೈತರು ಬಾಳೆಗೊನೆ ಕೊಯ್ದ ನಂತರ ಬೀಸಾಡುವ ಅನುಪಯುಕ್ತ ಬಾಳೆ ದಿಂಡಿನಿಂದ (Banana Stem) ಮ್ಯಾಟ್, ಫ್ಲೋರ್ ಮ್ಯಾಟ್, ಚಾಪೆ, ಬ್ಯಾಗ್, ಪರ್ಸ್, ಉಪ್ಪಿನಕಾಯಿ ಇತ್ಯಾದಿ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸುತ್ತಾ ಯಶಸ್ವಿ ಮಹಿಳಾ ಉದ್ಯಮಿಯಾಗಿ (Success Story) ಹೊರಹೊಮ್ಮುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಪ್ರೇರಣೆಯಾಗಿದ್ದಾರೆ.
ಸ್ವ ಉದ್ಯೋಗದ ಹಂಬಲ
ಚಾಮರಾಜನಗರದ ಗುಂಡ್ಲುಪೇಟೆ ತಾಲೋಕಿನ ಆಲಹಳ್ಳಿಯ ವರ್ಷಾ ಎಂ.ಟೆಕ್ ಪದವೀಧರೆಯಾದರೂ ಯಾವುದೇ ಉದ್ಯೋಗಕ್ಕೆ ಸೇರಿರಲಿಲ್ಲ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಹೊಂದಿದ್ದ ಅವರಿಗೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟ ಇರಲಿಲ್ಲ. ಸ್ವ ಉದ್ಯಮ ಪ್ರಾರಂಭಿಸಬೇಕು, ತಮ್ಮ ಕೈಲಾದಷ್ಟು ಮಹಿಳೆಯರಿಗೆ ಉದ್ಯೋಗ ನೀಡಬೇಕು ಆ ಮೂಲಕ ಸ್ತ್ರೀ ಸಬಲೀಕರಣಕ್ಕೆ ಕೈ ಜೋಡಿಸಬೇಕು ಎಂಬುದು ವರ್ಷಾ ಅವರ ಕನಸಾಗಿತ್ತು.
ಬೆಳೆದ ಬಾಳೆಯಿಂದ ಹೊಸ ಐಡಿಯಾ!
ಚಾಮರಾಜನಗರ ತಾಲೋಕಿನ ಉಮ್ಮತ್ತೂರು ಗ್ರಾಮದ ಬಳಿ ಜಮೀನಿನಲ್ಲಿ ವರ್ಷಾ ಅವರು ಬಾಳೆ ಬೆಳೆದಿದ್ದರು. ಫಸಲು ಬಂದ ನಂತರ ಬಾಳೆ ದಿಂಡು ವಿಲೇವಾರಿ ಮಾಡುವುದೇ ಕಷ್ಟವಾಯಿತು. ಬಾಳೆ ದಿಂಡನ್ನು ವಿಲೇವಾರಿ ಮಾಡುವುದು ಹೇಗೆ ಎಂಬುದರ ಬಗ್ಗೆ ಯೂಟ್ಯೂಬ್ನಲ್ಲಿ ಸರ್ಚ್ ಮಾಡುತ್ತಿದ್ದಾಗ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಾಳೆದಿಂಡಿನಿಂದ ಹಲವು ರೀತಿಯ ಉತ್ಪನ್ನಗಳ ತಯಾರಿಕೆ ಮಾಡುತ್ತಿರುವ ದೃಶ್ಯಾವಳಿ ನೋಡಿದ್ದಾರೆ. ತಾವೂ ಸಹ ಈ ಉದ್ಯಮವನ್ನೇ ಏಕೆ ಆರಂಭಿಸಬಾರದು ಎಂದುಕೊಂಡ ವರ್ಷಾ ಅಗತ್ಯ ಯಂತ್ರೋಪಕರಣಗಳನ್ನ ಖರೀದಿಸಿದರು.
ಬಾಳೆ ದಿಂಡಿನ ಉತ್ಪನ್ನ ತಯಾರಿ!
ಚೂರೂ ತಡಮಾಡದೇ ಉಮ್ಮತ್ತೂರಿನಲ್ಲಿರುವ ತಮ್ಮ ಜಮೀನಿನಲ್ಲಿ ಬಾಳೆ ದಿಂಡು ಉತ್ಪನ್ನಗಳ ತಯಾರಿಕಾ ಉದ್ಯಮ ಆರಂಭಿಸಿಯೇಬಿಟ್ರು. ಇದರ ಫಲವಾಗಿ ಬಾಳೆ ದಿಂಡಿನಿಂದ ಮ್ಯಾಟ್, ಫ್ಲೋರ್ ಮ್ಯಾಟ್, ಚಾಪೆ, ಬ್ಯಾಗ್, ಪರ್ಸ್, ಉಪ್ಪಿನಕಾಯಿಯನ್ನು ತಯಾರಿಸುತ್ತಾ,ಕಸದಿಂದ ರಸ ತೆಗೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.
ಪೇಟೆಯಲ್ಲಿದೆ ಮಾರ್ಕೆಟ್!
ವರ್ಷಾ ತಾವು ತಯಾರಿಸುವ ಬಾಳೆ ದಿಂಡಿನ ಉತ್ಪನ್ನಗಳಿಗೆ ನಗರ ಪ್ರದೇಶಗಳಲ್ಲಿರುವ ಆರ್ಗ್ಯಾನಿಕ್ ಶಾಪ್, ಗೂಗಲ್, ಫ್ಲಿಪ್ಕಾರ್ಟ್, ಅಮೇಜಾನ್ ಮೂಲಕ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ: Chamarajanagar: ಸಿಹಿ ಜೇನಷ್ಟೇ ಅಲ್ಲ, ಇಲ್ಲಿ ಕಹಿ ಜೇನೂ ಸಿಗುತ್ತೆ!
ನಾರನ್ನೂ ವೇಸ್ಟ್ ಮಾಡಲ್ಲ!
ಬಾಳೆ ದಿಂಡಿನಲ್ಲಿರುವ ರಸದಲ್ಲಿ ಪೊಟ್ಯಾಷಿಯಂ ಅಂಶ ಇರುವುದರಿಂದ ರಾಸಾಯನಿಕ ಗೊಬ್ಬರದ ಬದಲು ಬಾಳೆ ದಿಂಡಿನ ರಸ ಹಾಗೂ ದಿಂಡಿನಿಂದ ನಾರು ತೆಗೆದ ನಂತರ ಉಳಿಯುವ ವೇಸ್ಟ್ನಿಂದ ಸಾವಯವ ಗೊಬ್ಬರ ತಯಾರಿಸಿ ತಮ್ಮ ಜಮೀನಿಗೆ ಬಳಸುತ್ತಿದ್ದಾರೆ. ಹೀಗೆ ಬಾಳೆ ದಿಂಡಿನ ಯಾವ ಭಾಗವನ್ನು ಬಿಸಾಡದೆ ಸಂಪೂರ್ಣವಾಗಿ ಬಳಕೆ ಮಾಡಿ ಶೂನ್ಯ ತ್ಯಾಜ್ಯ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Chamarajanagar: ಪೊಲೀಸ್ ಅಧಿಕಾರಿ ಹುದ್ದೆಗೆ ಗುಡ್ ಬೈ, ರಾಜಕೀಯಕ್ಕೆ ಜೈ ಎಂದ ಇನ್ಸ್ಪೆಕ್ಟರ್!
ಅಷ್ಟೇ ಅಲ್ಲ, ವರ್ಷಾ ಅವರು ಸುತ್ತಮುತ್ತ ಬಾಳೆ ಬೆಳೆಯುವ ರೈತರನ್ನು ಸಂಪರ್ಕಿಸಿ ಅವರು ಅನುಪಯುಕ್ತ ಎಂದು ಬಿಸಾಡುತ್ತಿದ್ದ ಬಾಳೆದಿಂಡನ್ನು ಖರೀದಿಸುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ರೈತರಿಗೂ ಲಾಭವಾಗಿದೆ. ಸ್ವ ಉದ್ಯೋಗ ಮಾಡಬೇಕೆಂಬ ಕನಸು ನನಸು ಮಾಡಿಕೊಂಡಿರುವ ವರ್ಷಾ ಈ ಘಟಕದಲ್ಲಿ ಹಲವು ಮಹಿಳೆಯರಿಗೆ ಉದ್ಯೋಗ ನೀಡಿ ಸ್ತ್ರೀ ಸಬಲೀಕರಣಕ್ಕೆ ಪ್ರೇರಣೆಯಾಗಿದ್ದಾರೆ.
ವರದಿ: ಎಸ್.ಎಂ.ನಂದೀಶ್, ನ್ಯೂಸ್ 18 ಚಾಮರಾಜನಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ