ಹಳೆ ಕಾಲದ ಕೃಷಿ ಪದ್ಧತಿ(Agriculture System) ನಿಧಾನವಾಗಿ ಕಣ್ಮರೆಯಾಗುತ್ತಿದ್ದು, ಈಗಿನ ಯುವಕರು ಕೃಷಿಯತ್ತ ವಾಲುತ್ತಿರುವುದರ ಜೊತೆ ಆಧುನಿಕ ಕೃಷಿಯನ್ನು ಕೈಗೊಳ್ಳುತ್ತಿದ್ದಾರೆ. ಆಧುನಿಕ ಮತ್ತು ಸಾವಯವ ಕೃಷಿ ಈಗ ರೈತರನ್ನು(Farmers) ಕೈಹಿಡಿಯುತ್ತಿದೆ. ಜೊತೆಗೆ ಲಕ್ಷಾಂತರ ರೂಪಾಯಿ ಆದಾಯವನ್ನು ಸಹ ಸಂಪಾದಿಸುತ್ತಿದ್ದಾರೆ. ಇದಕ್ಕೆ ದೇಶಾದ್ಯಂತ ಹಲವಾರು ನಿದರ್ಶನಗಳಿವೆ. ಇಂತಹವರ ಪೈಕಿ ರಾಜಸ್ಥಾನದ ನಾಗೌರ್ ಜಿಲ್ಲೆಯ ರಾಜಪುರದ ಯುವ ರೈತ ಪ್ರಮುಖವಾಗಿದ್ದಾರೆ.
ಬಿಎಸ್ಸಿ ಮುಗಿಸಿ ಕೃಷಿ ಕಡೆ ವಾಲಿದ ಯುವಕ
ರಾಜಸ್ಥಾನದ ನಾಗೌರ್ ಜಿಲ್ಲೆಯ ರಾಜಪುರ ಗ್ರಾಮದ ರೈತ ಕುಟುಂಬದಿಂದ ಬಂದ ರಾಕೇಶ್ಗೆ ಕೃಷಿಯಲ್ಲಿ ಏನನ್ನಾದರೂ ಸಾಧನೆ ಮಾಡುವುದು ಕನಸಾಗಿತ್ತು. ಬಿಎಸ್ಸಿ ಮುಗಿಸಿದ ರಾಕೇಶ್ ಕುಟುಂಬ ವೃತ್ತಿಯನ್ನು ಮುಂದುವರೆಸಲು ನಿರ್ಧರಿಸಿ ವಿದ್ಯಾಭ್ಯಾಸ ಮುಗಿಸಿದ ನಂತರ ತಮ್ಮ ಹಳ್ಳಿ ಸೇರಿದರು.
ವರ್ಷಕ್ಕೆ 10 ಕೋಟಿ ಸಂಪಾದಿಸುತ್ತಿರುವ ರೈತ ರಾಕೇಶ್
ಹಳ್ಳಿಗೆ ಬಂದು ಕೃಷಿ ಆರಂಭಿಸಿದ ರಾಕೇಶ್ ಆಯ್ಕೆ ಮಾಡಿಕೊಂಡಿದ್ದು ಔಷಧಿ ಗಿಡಮೂಲಿಕೆಗಳ ಕೃಷಿಯನ್ನು. ಇಂದು ರಾಕೇಶ್ ಅವರು ತಮ್ಮ ವಿನಾಯಕ್ ಹರ್ಬಲ್ ಕಂಪನಿಯೊಂದಿಗೆ ಗಿಡಮೂಲಿಕೆ ಮತ್ತು ಔಷಧೀಯ ಸಸ್ಯಗಳನ್ನು ನೆಡುವ ಮೂಲಕ ವಾರ್ಷಿಕ 10 ಕೋಟಿ ರೂ. ಸಂಪಾದಿಸುತ್ತಿದ್ದಾರೆ.
ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಗುಜರಾತ್ ಸೇರಿದಂತೆ ದೇಶದಾದ್ಯಂತ ಫಾರ್ಮ್ಗಳನ್ನು ಹೊಂದಿದ್ದಾರೆ. ತಮ್ಮ ಸಾವಯವ ಔಷಧೀಯ ಕೃಷಿ ಮೂಲಕ 50,000 ಕ್ಕೂ ಹೆಚ್ಚು ರೈತರನ್ನು ತೊಡಗಿಸಿಕೊಂಡು ಅವರಿಗೂ ಜೀವನೋಪಾಯ ಒದಗಿಸಿಕೊಟ್ಟಿದ್ದಾರೆ.
ಗಿಡಮೂಲಿಕೆ ಸಸ್ಯಗಳನ್ನು ನೆಡುವುದರ ಹಿಂದಿನ ಸ್ಫೂರ್ತಿಯ ಬಗ್ಗೆ ಮಾತನಾಡಿದ ರಾಕೇಶ್ “2003 ರಲ್ಲಿ, ನಾನು ವಿವಿಧ ಕೃಷಿ ವ್ಯವಹಾರಗಳ ಬಗ್ಗೆ ನೋಡುತ್ತಿದ್ದಾಗ ರಾಜ್ಯ ಔಷಧೀಯ ಸಸ್ಯ ಮಂಡಳಿಯ ಕರಾರಿನ ಬೇಸಾಯದ ಯೋಜನೆಯ ಬಗ್ಗೆ ನನಗೆ ತಿಳಿಯಿತು.
ಈ ಯೋಜನೆಯಲ್ಲಿ, ಔಷಧೀಯ ಸಸ್ಯಗಳ ಗುತ್ತಿಗೆ ಕೃಷಿ ಮಾಡುವ ರೈತರಿಗೆ ಸರ್ಕಾರವು ಸಹಾಯಧನವನ್ನು ನೀಡುತ್ತಿತ್ತು. ಆದರೆ ಆ ಸಮಯದಲ್ಲಿ, ನನ್ನ ಕುಟುಂಬ ಸೇರಿದಂತೆ ನಮ್ಮೂರಲ್ಲಿ ಯಾರೂ ಸಾಂಪ್ರದಾಯಿಕ ಕೃಷಿಯನ್ನು ಹೊರತುಪಡಿಸಿ ಬೇರೆ ಕೃಷಿಯನ್ನು ಮಾಡುತ್ತಿರಲಿಲ್ಲ. ಆದರೆ ನಾನು ಈ ಔಷಧೀಯ ಕೃಷಿಯಲ್ಲಿಯೇ ಏನನ್ನಾದರೂ ಸಾಧಿಸಬೇಕು ಎಂದು ನಿರ್ಧರಿಸಿ ಅದರಲ್ಲೆ ಮುಂದುವರೆದೆ ಎನ್ನುತ್ತಾರೆ ರಾಕೇಶ್.
ಇದನ್ನೂ ಓದಿ: Agriculture: ಸರ್ಟಿಫೈಡ್ ಭತ್ತದ ಬೀಜ ಉತ್ಪಾದನೆಯಲ್ಲಿ ಕ್ರಾಂತಿ, ಒಡಿಸ್ಸಾದ ರೈತನ ಸಾಧನೆ!
ಕೃಷಿಗೆ ಹಣ ಜೋಡಿಸಲು ಹೆಂಡತಿ ಚಿನ್ನ, ಜಾನುವಾರ ಮಾರಿದ್ದ ರಾಕೇಶ್
ರಾಕೇಶ್ ಈ ಕೃಷಿ ಸಾಧನೆ ಅಭೂತಪೂರ್ವವಾಗಿದ್ದರೂ ಈ ಯಶಸ್ಸಿನ ರುಚಿ ಅನುಭವಿಸುವ ಮುನ್ನ ರಾಕೇಶ್ ಹಲವು ಸೋಲನ್ನು ನೋಡಿದವರು. ಉದ್ಯಮ ಆರಂಭಿಸಿದರೂ ಹಣದ ಕೊರತೆಯಿಂದಾಗಿ ಅದರಿಂದ ಸರಿಯಬೇಕಾಯಿತು.
ಈ ವಿನಾಯಕ್ ಫಾರ್ಮ್ ಆರಂಭಿಸಲು ಕೂಡ ರಾಕೇಶ್ಗೆ ಹಣದ ಹರಿವಿನ ದೊಡ್ಡ ತೊಂದರೆ ಇತ್ತು. “ನನ್ನಂತಹ ಸಣ್ಣ ರೈತನಿಗೆ ಕೃಷಿ ಆರಂಭಿಸಲು ಹಣ ಹೊಂದಿಸುವುದೇ ಕಷ್ಟವಾಗಿತ್ತು. ನನ್ನ ಹೆಂಡತಿ ಚಿನ್ನಾಭರಣಗಳನ್ನು ಅಡಮಾನವಿಟ್ಟು ಸಾಲ ಪಡೆದೆ. ನನ್ನ ಮೊದಲ ಬೆಳೆಯನ್ನು ಬಿತ್ತಲು ಅಗತ್ಯವಾದ ಹಣ ಕೂಡಿಸಲು ನಾವು ಕೆಲವು ಜಾನುವಾರುಗಳನ್ನು ಸಹ ಮಾರಾಟ ಮಾಡಿದ್ದೇವೆ,”ಎಂದು ರಾಕೇಶ್ ತಮ್ಮ ಆರಂಭದ ಕಷ್ಟದ ದಿನಗಳ ಬಗ್ಗೆ ಹೇಳಿದರು.
ಕೈಹಿಡಿಯಲಿಲ್ಲ ಮೊದಲ ಪ್ರಯತ್ನ
2004 ರಲ್ಲಿ, ಅವರು ತಮ್ಮ ಕುಟುಂಬದ ಜಮೀನಿನ ಒಂದು ಭಾಗವನ್ನು ಬಳಸಿಕೊಂಡು ಮೊದಲ ಬೆಳೆಯಾಗಿ ಮುಲೇತಿ (ಮದ್ಯ) ಮತ್ತು ಜ್ವಾಲೆಯ ಲಿಲ್ಲಿಯನ್ನು ಬಿತ್ತಿದರು.
ಆದರೆ ರಾಜಸ್ಥಾನದ ವಾತಾವರಣ ಈ ಬೆಳೆಗೆ ಸರಿಹೊಂದದ ಕಾರಣ ಈ ಬೆಳೆಗಳು ರಾಕೇಶ್ ಕೈಹಿಡಿಯಲಿಲ್ಲ. ಇದರಿಂದ ಕುಗ್ಗದ ರಾಕೇಶ್ ಛಲ ಬಿಡದೆ ಮತ್ತೇ ತಮ್ಮ ಟ್ರ್ಯಾಕ್ಟರ್ ಅನ್ನೂ ಅಡವಿಟ್ಟು ಎರಡನೇ ಬೆಳೆ ಬೆಳೆಯಲು ಹಣ ಜೋಡಿಸಿದರು.
2017ರಲ್ಲಿ ವಿನಾಯಕ್ ಹರ್ಬಲ್ ಆರಂಭಿಸಿದ ರೈತ
"ಜನರ ಟೀಕೆಗಳ ನಡುವೆಯೇ, ರಾಜಸ್ಥಾನದ ಮಣ್ಣು, ಹವಮಾನಕ್ಕೆ ಹೊಂದಿಕೆಯಾಗುವ ಎರಡನೇ ಬೆಳೆಯಾಗಿ ಆಲೋವೆರಾವನ್ನು ಬೆಳೆಸಿದೆ. ಈ ಕೃಷಿ ತನ್ನ ಕೈ ಹಿಡಿಯಿತು.
2005 ರ ಹೊತ್ತಿಗೆ, ನನಗೆ ಆಲೋವೆರಾ ಕೃಷಿಯ ಮೇಲೆ ಒಂದು ಹಿಡಿತ ಸಿಕ್ಕಿತ್ತು. 2006 ರಲ್ಲಿ, ನಾನು ಅಲೋವೆರಾ ಕೃಷಿಗೆ ನನ್ನ ಮೊದಲ ಗ್ರಾಹಕನನ್ನು ಕಂಡುಕೊಂಡೆ ಮತ್ತು ಅವರು ಅದನ್ನು ಕೆಜಿಗೆ 1.5 ರೂ.ಗೆ ಖರೀದಿಸಿದರು" ಎಂದು ಅವರು ಹೇಳುತ್ತಾರೆ.
ಹೀಗೆ ಹಂತಹಂತವಾಗಿ ಔಷಧಿ ಕೃಷಿಯಲ್ಲಿ ಏರುತ್ತಿದ್ದ ರಾಕೇಶ್ ಬಳಿಕ ದೇಶಾದ್ಯಂತ ಹೆಚ್ಚು ಹೆಚ್ಚು ರೈತರನ್ನು ತಲುಪಲು ನಿರ್ಧರಿಸಿ ಔಷಧೀಯ ಕೃಷಿಯ ಪ್ರಯೋಜನಗಳ ಬಗ್ಗೆ ರೈತರಿಗೆ ತಿಳಿಸಿದರು.
ಹೀಗೆ ಸುಮಾರು ಹತ್ತು ವರ್ಷ ಕೃಷಿಯಲ್ಲಿ ಗುದ್ದಾಡಿದ ರಾಕೇಶ್ 2017 ರಲ್ಲಿ, ಅವರು ತಮ್ಮ ಸಂಸ್ಥೆಯಾದ ವಿನಾಯಕ್ ಹರ್ಬಲ್ ಅನ್ನು ಪ್ರಾರಂಭಿಸಿದರು.
ಅದರೊಂದಿಗೆ ಅವರು ದೇಶಾದ್ಯಂತ ಸಾವಿರಾರು ರೈತರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಯಿತು. ಜೊತೆಗೆ ದೇಶದಾದ್ಯಂತ ಹಲವಾರು ರಾಜ್ಯಗಳಲ್ಲಿ ಫಾರ್ಮ್ಗಳನ್ನು ಸಹ ಆರಂಭಿಸಿದರು.
120ಕ್ಕೂ ಹೆಚ್ಚು ಬಗೆಯ ಔಷಧೀಯ ಸಸ್ಯಗಳನ್ನು ಕೃಷಿ ಮಾಡುತ್ತಿದ್ದಾರೆ ಇವರು
ಪ್ರಸ್ತುತ ರಾಕೇಶ್ ತಮ್ಮ ಹರ್ಬಲ್ ಕಂಪನಿ ಮೂಲಕ 120 ಕ್ಕೂ ಹೆಚ್ಚು ಬಗೆಯ ಔಷಧೀಯ ಸಸ್ಯಗಳನ್ನು ಬೆಳೆಸಿ ಅವುಗಳನ್ನು ದೇಶಾದ್ಯಂತ ಫಾರ್ಮಾ ಕಂಪನಿಗಳು ಮತ್ತು ಡೀಲರ್ಗಳಿಗೆ ರವಾನಿಸುತ್ತಾರೆ.
ಇವುಗಳಲ್ಲಿ ಅಲೋವೆರಾ, ಅಶ್ವಗಂಧ (ವಿಥಾನಿಯಾ ಸೊಮ್ನಿಫೆರಾ), ಕ್ಯಾಮೊಮೈಲ್, ಸ್ಟೀವಿಯಾ, ಚಿಯಾ, ಅಕರ್ಕರ (ಅನಾಸೈಕ್ಲಸ್ ಪೈರೆಥ್ರಮ್), ಮೆಥಿ (ಮೆಂತ್ಯ), ಮತ್ತು ಸೌನ್ಫ್ (ಫೆನ್ನೆಲ್) ಸೇರಿವೆ.
ಕೃಷಿ ಕ್ಷೇತ್ರ ಎಷ್ಟು ಲಾಭದಾಯಕ ಎಂಬುದನ್ನು ಸಾಬೀತುಪಡಿಸುವ ಮೂಲಕ ಹೆಚ್ಚು ಹೆಚ್ಚು ಯುವಕರನ್ನು ಕೃಷಿ ಕ್ಷೇತ್ರಕ್ಕೆ ಪ್ರೇರೇಪಿಸುವ ಕೆಲಸ ನಾನು ಮಾಡಬೇಕಾಗಿದೆ.
"ಸರಿಯಾದ ಜನರು, ಜ್ಞಾನ ಮತ್ತು ಕಷ್ಟದ ಸಮಯದಲ್ಲಿ ಹೋರಾಡುವ ಇಚ್ಛೆಯೊಂದಿಗೆ, ಯಾರಾದರೂ ಯಶಸ್ವಿ ರೈತರಾಗಬಹುದು" ಎಂದು ಯುವ ಜನತೆ ಹೆಚ್ಚು ಕೃಷಿಯಲ್ಲಿ ತೊಡಗಬೇಕು ಎಂದು ರಾಕೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ