ಬೆಲ್ಲ ಹಾಗೂ ಸಕ್ಕರೆಯನ್ನು ಹೋಲಿಸಿದರೆ ಬೆಲ್ಲದಲ್ಲಿ ಆರೋಗ್ಯ ಪ್ರಯೋಜನಗಳು ಹೆಚ್ಚು. ನಮ್ಮಲ್ಲಿ ಅನೇಕರು ಬೆಲ್ಲದ ಪ್ರಯೋಜನಗಳನ್ನರಿತು ಸಕ್ಕರೆ ಬದಲಿಗೆ ಬೆಲ್ಲವನ್ನು ಬಳಸಲು ಆರಂಭಿಸಿದ್ದಾರೆ. ಇಂಥವರಲ್ಲಿ ಲುಧಿಯಾನದ 27 ವರ್ಷದ ನವನೂರ್ ಕೌರ್ ಕುಟುಂಬ (Family) ಕೂಡ ಒಂದು. ಪಂಜಾಬ್ನ ನವನೂರ್ ಕೌರ್ ಕುಟುಂಬ 2018ರಲ್ಲಿ ಸಂಸ್ಕರಿಸಿದ ಸಕ್ಕರೆಯಿಂದ (Sugar) ಬೆಲ್ಲಕ್ಕೆ ಬದಲಾಯಿತಲ್ಲದೇ ಇವರು ತಮ್ಮದೇ ಆದ ಬೆಲ್ಲದ ಬ್ರಾಂಡ್ ಕೂಡ ಸ್ಥಾಪಿಸಿದ್ದಾರೆ. ಅಂದಹಾಗೆ ನವನೂರ್ ಅವರು IIM ಘಾಜಿಯಾಬಾದ್ನಿಂದ ಮಾರ್ಕೆಟಿಂಗ್ನಲ್ಲಿ(Market) MBA ಅನ್ನು ಪೂರ್ಣಗೊಳಿಸಿದ್ದಾರೆ. ನಂತರ ಕಾರ್ಪೊರೇಟ್ ವಲಯದಲ್ಲಿ ಮಾರಾಟ ವೃತ್ತಿಪರರಾಗಿ ಕೆಲಸ ಮಾಡಿದ್ದಾರೆ. ಬೆಲ್ಲದ ಬ್ರಾಂಡ್ ಸೃಷ್ಟಿಸುವ ಯೋಚನೆ ಆಗಲೇ ಅವರ ಮನಸ್ಸಲ್ಲಿತ್ತು. ಇದಕ್ಕಾಗಿ ಅವರು ಸಂಶೋಧನೆ ಆರಂಭಿಸಿದರು. ಅದು ಅಂತಿಮವಾಗಿ 2021 ರಲ್ಲಿ ಜಾಗರ್ ಕೇನ್ ಅನ್ನು ಪ್ರಾರಂಭಿಸಲು ಕಾರಣವಾಯಿತು.
ಜಾಗರ್ ಕೇನ್ ಸಾಹಸೋದ್ಯಮದ ಹಾದಿ
ನವನೂರ್ ಅವರು ಈ ಬ್ರಾಂಡ್ಅನ್ನು ಸ್ಥಾಪಿಸುವಾಗ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದರು. ಇದೇವೇಳೆ ಅವರು ಕೃಷಿಯಲ್ಲಿ ಎಂಬಿಎ ಪದವೀಧರ ಕೌಶಲ್ ಸಿಂಗ್ ಅವರನ್ನು ಭೇಟಿಯಾದರು. ಅಂದಹಾಗೆ ಸಿಂಗ್ ಕೂಡ ಒಮ್ಮೆ ಬೆಲ್ಲದ ಬ್ರಾಂಡ್ ಅನ್ನು ನಿರ್ಮಿಸುವ ಉತ್ಸಾಹವನ್ನು ಹಂಚಿಕೊಂಡಿದ್ದರು. ಆದರೆ ಕಡಿಮೆ ಮಾರುಕಟ್ಟೆ ಬೇಡಿಕೆಯಿಂದಾಗಿ ಆ ಆಸೆಯನ್ನೇ ಬಿಟ್ಟಿದ್ದರು.
ಆದ್ರೆ ನವನೂರ್ ಭೇಟಿಯಾದ ಬಳಿಕ ಇಬ್ಬರೂ ಸೇರಿ ಜಾಗರ್ ಕೇನ್ ಅನ್ನು ಮುನ್ನಡೆಸಲು ನಿರ್ಧರಿಸಿದರು. ಬೆಲ್ಲದ ಬಗ್ಗೆ ಜನರ ಮನಸ್ಥಿತಿಯನ್ನು ಬದಲಾಯಿಸಿ ಬೆಲ್ಲವನ್ನು ಟ್ರೆಂಡಿ ಐಟಂ ಆಗಿ ಬದಲಾಯಿಸಲು ನಿರ್ಧರಿಸಿದರು. ಬೆಲ್ಲವನ್ನು ಬೇಸ್ ಆಗಿ ಬಳಸಿಕೊಂಡು ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಅದರ ಪ್ರಯೋಜನಗಳನ್ನು ಹೆಚ್ಚಿಸಲು ಆರಂಭಿಸಿದರು. ನವನೂರ್ ಅವರು ಮಾರ್ಕೆಟಿಂಗ್ ಮೂಲಕ ಯೋಜನೆಗಳನ್ನು ಜಾರಿಗೆ ತಂದರೆ ಸಿಂಗ್ ಅವರು ಉದ್ಯಮದಲ್ಲಿ ವರ್ಷಗಳ ಪರಿಣತಿಯನ್ನು ಪ್ರಯೋಗಿಸಿದರು.
ಇದನ್ನೂ ಓದಿ: ಅಡಿಕೆಗೆ ಈ ಬೆಳೆ ಪರ್ಯಾಯವಂತೆ! ಖರ್ಚು ಕಡಿಮೆ, ಬೆಲೆ ಹೆಚ್ಚು!
"ನಮ್ಮ ಉತ್ಪನ್ನಗಳನ್ನು ಜನರು ಖರೀದಿಸಲು ನಿರ್ಧರಿಸುವ ಮೊದಲು ಅವುಗಳನ್ನು ರುಚಿ ನೋಡಲು ನಾವು ಹೇಳಿದೆವು. ಜನರ ಪ್ರತಿಕ್ರಿಯೆ ಪಡೆಯಲು ಮತ್ತು ಅದನ್ನು ಸುಧಾರಿಸಲು ನಾವು ಲುಧಿಯಾನದಲ್ಲಿ ಮಾದರಿ ಮಳಿಗೆಗಳನ್ನು ಸ್ಥಾಪಿಸಿದ್ದೇವೆ. ನಮ್ಮ ಉತ್ಪನ್ನಗಳು ಜನರ ಪ್ರೀತಿಯನ್ನು ಗಳಿಸಲು ಪ್ರಾರಂಭಿಸಿದಾಗ ರೋಮಾಂಚನಗೊಂಡೆವು” ಎಂಬುದಾಗಿ ನವನೂರ್ ಹೇಳುತ್ತಾರೆ.
"ಜನರು ನಮ್ಮ ಉತ್ಪನ್ನಗಳನ್ನು ಪರೀಕ್ಷಿಸಿದ ನಂತರ ಖರೀದಿಸುತ್ತಿದ್ದರು. ಇದರಲ್ಲಿ ತೆಂಗಿನಕಾಯಿ ಬೆಲ್ಲದ ಚೂರು ಜನಪ್ರಿಯ ಉತ್ಪನ್ನವಾಗಿದೆ" ಎನ್ನುತ್ತಾರೆ ನವನೂರ್.
2 ಕೋಟಿ ವಾರ್ಷಿಕ ವಹಿವಾಟು
2021 ರಲ್ಲಿ ನವನೂರ್ ಮಾರಾಟ ವೃತ್ತಿಪರರಾಗಿ ತಮ್ಮ ಕೆಲಸವನ್ನು ತೊರೆದರು. ಅಲ್ಲದೇ ಜಾಗರ್ ಕೇನ್ ಅನ್ನು ಔಪಚಾರಿಕವಾಗಿ ಪ್ರಾರಂಭಿಸಲಾಯಿತು. ಈ ಬ್ರ್ಯಾಂಡ್ 2022 ರ ಹೊತ್ತಿಗೆ ಇಲ್ಲಿಯವರೆಗೆ 2 ಕೋಟಿಗಳಷ್ಟು ವಾರ್ಷಿಕ ವಹಿವಾಟು ನಡೆಸಿದೆ.
ಲುಧಿಯಾನದಲ್ಲಿ 22 ರೈತರೊಂದಿಗೆ ಕೆಲಸ ಮಾಡುತ್ತಿದ್ದು, ಈ ಬ್ರ್ಯಾಂಡ್ "ಒಂದು ವರ್ಷದಲ್ಲಿ 200 ಎಕರೆ ಕಬ್ಬು ಮತ್ತು 110 ಎಕರೆ ಗುತ್ತಿಗೆ ಕೃಷಿಯನ್ನು ಹೊಂದಿದೆ" ಎಂಬುದಾಗಿ ಅವರು ಮಾಹಿತಿ ನೀಡುತ್ತಾರೆ. ಅವರು ಈಗ ಪ್ರತಿ ತಿಂಗಳು 1,000 ಕೆಜಿ ಬೆಲ್ಲವನ್ನು ಮಾರಾಟ ಮಾಡುತ್ತಿದ್ದಾರೆ. ಇಲ್ಲಿಯವರೆಗೆ, ಯುಎಇ, ಕೆನಡಾ, ಸಿಂಗಾಪುರ್ ಮತ್ತು ಆಸ್ಟ್ರೇಲಿಯಾದಂತಹ ಸ್ಥಳಗಳಿಗೆ 1,90,000 ಕೆಜಿ ರಫ್ತು ಮಾಡಲಾಗಿದೆ ಎಂದು ನವನೂರ್ ಮಾಹಿತಿ ನೀಡಿದ್ದಾರೆ.
“ನಮ್ಮ ಸಂಶೋಧನಾ ಅವಧಿಯ ಮೂಲಕ, ಬೆಲ್ಲದ ವಿಷಯಕ್ಕೆ ಬಂದಾಗ ಜನರು ಹೊಂದಿರುವ ಮುಖ್ಯ ಕಾಳಜಿಯೆಂದರೆ ಅದು ಸುಲಭವಾಗಿ ಕೆಟ್ಟುಹೋಗುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ತೇವಾಂಶವನ್ನು ತ್ವರಿತವಾಗಿ ಹೀರಿಕೊಳ್ಳುವ ಗುಣವೇ ಇದಕ್ಕೆ ಕಾರಣ ಎನ್ನುವ ನವನೂರ್ ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯವು pH ಮಟ್ಟವನ್ನು ನಿರ್ಧರಿಸಲು ಮತ್ತು ಮಣ್ಣಿನ ಪರೀಕ್ಷೆಗೆ ಸಹಾಯ ಮಾಡಿದೆ. ನಮ್ಮ ಸುಧಾರಣೆಯ ಮೂಲಕ, pH ಮಟ್ಟಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ನಾವು ಸಮರ್ಥರಾಗಿದ್ದೇವೆ ಎಂದು ಸಿಂಗ್ ಹಾಗೂ ನವನೂರ್ ಹೇಳುತ್ತಾರೆ.
ಅಲ್ಲದೇ ನವನೂರ್ ಅವರು ಬೆಳೆಗಳನ್ನು ಬೆಳೆಯುವ ವಿಷಯಗಳಲ್ಲಿ ರೈತರಿಗೆ ಮಾರ್ಗದರ್ಶನ ನೀಡುತ್ತಾರೆ. ಯಾವ ತಿಂಗಳುಗಳ ಮೇಲೆ ಕೇಂದ್ರೀಕರಿಸಬೇಕು, ಕೊಯ್ಲು ಮಾಡುವ ಬಗ್ಗೆ, ಬೆಳೆಯ ಗುಣಮಟ್ಟದ ವಿವರಗಳನ್ನೂ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ