ಆರ್ಥಿಕ ನಷ್ಟದಲ್ಲಿರುವ ಬೈಜೂಸ್ ( Bjyu's) ಒಂದೊಂದೆ ಸಮಸ್ಯೆಗಳನ್ನು, ಆರೋಪಗಳನ್ನು ಎದುರಿಸುತ್ತಿದೆ. ಸಾಲ ನೀಡುವ ಒಪ್ಪಂದ, ಪೋಷಕರಿಗೆ ಆಮಿಷ, ಉದ್ಯೋಗಿಗಳ (Employee) ಮೇಲೆ ದೌರ್ಜನ್ಯ, ಕೆಲಸದ ಸಂಸ್ಕೃತಿ ಹೀಗೆ ಹಲವು ಆರೋಪಗಳು ಕೇಳಿ ಬಂದಿವೆ. ಈ ನಡುವೆ ಭಾರತದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬೈಜೂಸ್ನ ಸಿಇಒ ರವೀಂದ್ರನ್ಗೆ (CEO Byju's Raveendran) ನೋಟಿಸ್ ನೀಡಿದೆ. ಬೈಜೂಸ್ನಲ್ಲಿ ಕೋರ್ಸ್ಗಳನ್ನು ಖರೀದಿ ಮಾಡುವಂತೆ ವಿದ್ಯಾರ್ಥಿಗಳು (Students) ಹಾಗೂ ಪೋಷಕರಿಗೆ (Parents) ಆಮಿಷ ಒಡ್ಡಿದ್ದಾರೆ. ಸಾಲ ಒಪ್ಪಂದಗಳನ್ನು ಮಾಡಿದ್ದಾರೆ. ದಬ್ಬಾಳಿಕೆ ಮಾಡಿ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕಾಗಿ ಬೈಜೂಸ್ನ ಸಿಇಒ ರವೀಂದ್ರನ್ಗೆ ಆಯೋಗವು ಸಮನ್ಸ್ ನೀಡಿ ವಿಚಾರಣೆಗೆ ಖುದ್ಧಾಗಿ ಬರುವಂತೆ ತಿಳಿಸಿದೆ.
ಕಡಿಮೆ ಆದಾಯವಿರುವ ಕುಟುಂಬಗಳಿಗೆ ಕೋರ್ಸ್ ಮಾರಾಟ ಸ್ಥಗಿತ
ಈ ಎಲ್ಲಾ ಆರೋಪಗಳ ಬೆನ್ನಲ್ಲೇ ಕಡಿಮೆ-ಆದಾಯದ ಕುಟುಂಬಗಳಿಗೆ ಪಾವತಿಸಲು ಕಷ್ಟವಾಗುವ ಬೋಧನೆಯನ್ನು ಮಾರಾಟ ಮಾಡುವುದನ್ನು ನಿಲ್ಲಿಸುವುದಾಗಿ ಬೈಜೂಸ್ ತಿಳಿಸಿದೆ. ₹25,000ಕ್ಕಿಂತ ಕಡಿಮೆ ಮಾಸಿಕ ಆದಾಯ ಹೊಂದಿರುವ ಕುಟುಂಬಗಳಿಗೆ ಅದರ ಕೋರ್ಸ್ಗಳನ್ನು ಮಾರಾಟ ಮಾಡುವುದನ್ನು ಅಥವಾ ಸಾಲವನ್ನು ಒದಗಿಸುವುದನ್ನು ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬೈಜೂಸ್ ತಿಳಿಸಿದೆ. ಕಂಪನಿಯು "ಅಫರ್ಡೆಬಿಲಿಟಿ ಚೆಕ್" ಮಾಡುವುದನ್ನು ಪ್ರಾರಂಭಿಸುವುದಾಗಿ ಸ್ಥಾಪಕ ಪಾಲುದಾರ ಪ್ರವೀಣ್ ಪ್ರಕಾಶ್ ಘೋಷಿಸಿದ್ದಾರೆ.
ಬೈಜೂಸ್ ವಿರುದ್ಧ ಆರೋಪ
ಸಾಮಾಜಿಕ ಮಾಧ್ಯಮಗಳು ಮತ್ತು ಗ್ರಾಹಕರ ವೆಬ್ಸೈಟ್ಗಳಲ್ಲಿ ಗ್ರಾಹಕರು, ಬೈಜೂಸ್ನಿಂದ ಶೋಷಣೆಗೆ ಒಳಗಾಗಿದ್ದು, ನಮಗೆ ವಂಚನೆ ಎಸಗಲಾಗಿದೆ. ಇದರಿಂದ ನಮ್ಮ ಉಳಿತಾಯ ಮತ್ತು ಭವಿಷ್ಯವನ್ನು ಅಪಾಯಕ್ಕೆ ಒಡ್ಡಿಕೊಂಡಿರುವುದಾಗಿ ದೂರಿದ್ದಾರೆ.
"ಪೋಷಕರು ಅಥವಾ ಮಕ್ಕಳನ್ನು ಸಾಲ ಆಧಾರಿತ ಒಪ್ಪಂದಗಳಿಗೆ ಒಳಪಡಿಸುವುದು ಮತ್ತು ನಂತರ ಶೋಷಣೆಗೆ ಕಾರಣವಾಗುವ ದುಷ್ಕೃತ್ಯಗಳಲ್ಲಿ ತೊಡಗುವುದು ಮಕ್ಕಳ ಕಲ್ಯಾಣಕ್ಕೆ ವಿರುದ್ಧವಾಗಿದೆ. ಹಾಗೂ ಸಿಪಿಸಿಆರ್ ಕಾಯಿದೆ 2005ರ ಸೆಕ್ಷನ್ 13 ಮತ್ತು 14ರ ಅಡಿಯಲ್ಲಿ ಅಪರಾಧವಾಗಿದೆ” ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳಿದೆ.
ಬೈಜೂಸ್ ಸಿಇಒಗೆ ಮಕ್ಕಳ ಹಕ್ಕುಗಳ ಆಯೋಗದಿಂದ ಸಮನ್ಸ್
ಬೈಜೂಸ್ನಲ್ಲಿ ಕೋರ್ಸ್ಗಳನ್ನು ಖರೀದಿ ಮಾಡುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಮಿಷ ಒಡ್ಡಿದ್ದಾರೆ. ಸಾಲ ಒಪ್ಪಂದಗಳನ್ನು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಬೈಜೂಸ್ನ ಸಿಇಒ ರವೀಂದ್ರನ್ಗೆ ಆಯೋಗವು ಸಮನ್ಸ್ ನೀಡಿದೆ. ಹಾಗೆಯೇ ಕೋರ್ಸ್ ಬಗ್ಗೆ ಮಾಹಿತಿ, ಶುಲ್ಕ ಎಷ್ಟಿದೆ, ನೋಂದಣಿ ಹೇಗೆ, ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ, ಕಂಪನಿಯ ಹಣ ಮರುಪಾವತಿ ನೀತಿ ಮೊದಲಾದವುಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಬೇಕು ಎಂದು ಕೂಡಾ ಆಯೋಗವು ಸೂಚಿಸಿದೆ.
ಇದನ್ನೂ ಓದಿ: Byjus Off Campus Drive 2023: ಬೈಜೂಸ್ ನೇಮಕಾತಿ-ವಾರ್ಷಿಕ ಪ್ಯಾಕೇಜ್ 8.5 ಲಕ್ಷ
"ಕಂಪನಿಯ ಆಕ್ರಮಣಕಾರಿ ನೀತಿಗಳಿಂದ ಮಕ್ಕಳು ಮತ್ತು ಅವರ ಕುಟುಂಬಗಳು ಅನುಭವಿಸುತ್ತಿರುವ ಮಾನಸಿಕ ಆಘಾತದಿಂದ ಇಂದು ಸ್ವಲ್ಪ ಪರಿಹಾರವನ್ನು ಪಡೆದಿದ್ದಾರೆ" ಎಂದು NCPCR ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಫೋನ್ ಸಂದರ್ಶನದಲ್ಲಿ ಹೇಳಿದರು. "ನಾವು ಟೆಕ್ ಕಂಪನಿಯ ಕಾರ್ಯನಿರ್ವಹಣೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ಅವರ ಶೋಷಣೆಯ ತಂತ್ರಗಳ ಪ್ರಭಾವವು ಖಂಡಿತವಾಗಿಯೂ ನಮ್ಮ ವ್ಯಾಪ್ತಿಯಲ್ಲಿದೆ" ಎಂದು ತಿಳಿಸಿದರು.
ಆರ್ಥಿಕ ಸಂಕಷ್ಟದಲ್ಲಿ ಬೈಜೂಸ್
ಬೆಂಗಳೂರಿನಲ್ಲಿ ನೆಲೆಸಿರುವ ಕಂಪನಿಯು 2011 ರಲ್ಲಿ ಸ್ಥಾಪನೆಯಾಯಿತು ಮತ್ತು 2015 ರಲ್ಲಿ ತನ್ನ ಕಲಿಕೆಯ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿತು. COVID-19 ಸಾಂಕ್ರಾಮಿಕ ಸಮಯದಲ್ಲಿ, ಶಾಲೆಗಳು ಬಂದ್ ಆದ ವೇಳೆ ಇಂತಹ ಹಲವು ಎಡ್ಟೆಕ್ ಕಂಪನಿಗಳು ನಾಯಿಕೊಡೆಯಂತೆ ತಲೆಎತ್ತಿದ್ದವು. ಆ ವೇಳೆ ಆರ್ಥಿಕವಾಗಿ ಸಹ ಕಂಪನಿಗಳು ಉತ್ತಮವಾಗಿದ್ದವು. ಆದರೆ ಕೊರೋನಾ ಕಡಿಮೆಯಾಗಿದ್ದು, ಶಾಲೆಗಳತ್ತ ಮಕ್ಕಳು ಮುಖ ಮಾಡಿದ ನಂತರ ಬೈಜೂಸ್ ಸೇರಿ ಹಲವು ಶೈಕ್ಷಣಿಕ ಕಂಪನಿಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ