ಬೆಂಗಳೂರು(ಫೆ.01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು, ಬುಧವಾರ ಮಂಡಿಸಲಿರುವ ಕೇಂದ್ರ ಬಜೆಟ್ನಿಂದ (Union Budget) ಚುನಾವಣೆಗೆ ಎದುರಿಸಲಿರೋ ಕರ್ನಾಟಕವು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಫೆಬ್ರವರಿ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಮಂಡಿಸಲಿರುವ ರಾಜ್ಯ ಬಜೆಟ್ಗೆ (Karnataka Budget) ಕೇವಲ ಮೂರು ವಾರಗಳ ಮೊದಲು ಕೇಂದ್ರ ಬಜೆಟ್ ಅನ್ನು ಮಂಡಿಸಲಾಗುತ್ತಿದೆ. ಸೀತಾರಾಮನ್ ಕರ್ನಾಟಕದ ರಾಜ್ಯಸಭಾ ಸದಸ್ಯರಾಗಿರುವ ಕಾರಣ ನಿರೀಕ್ಷೆಗಳು ಮತ್ತಷ್ಟು ಹೆಚ್ಚಿವೆ.
ಇನ್ನು ರಾಜಕೀಯ ವಿಶ್ಲೇಷಕ ಪ್ರೊ. ಸಂದೀಪ್ ಶಾಸ್ತ್ರಿ ಈ ಬಗ್ಗೆ ಮಾತನಾಡಿ, ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಕರ್ನಾಟಕವು ಪ್ರಮುಖ ಘೋಷಣೆಗಳನ್ನು ನಿರೀಕ್ಷಿಸಬಹುದು. ಕೇಂದ್ರ ಸರ್ಕಾರವು ಚುನಾವಣೆಗೆ ಒಳಪಡುವ ರಾಜ್ಯಗಳಿಗೆ ವಿಶೇಷ ಹಂಚಿಕೆಗಳನ್ನು ಪರಿಗಣಿಸುವುದರಿಂದ ಅಥವಾ ಘೋಷಿಸುವುದರಿಂದ ಇದು ಸಾಮಾನ್ಯವಾಗಿದೆ. ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಗಲಿದೆ ಎಂದೂ ಅವರು ಹೇಳಿದ್ದಾರೆ. ಕೇಂದ್ರ ಬಜೆಟ್ನಲ್ಲಿ ಬೆಂಗಳೂರಿನ ಮೇಲೆ ಹೆಚ್ಚಿನ ಒತ್ತು ನೀಡಿ ಮೂಲಸೌಕರ್ಯ ಅಭಿವೃದ್ಧಿಗೆ ಗಮನ ನೀಡುವ ಸಾಧ್ಯತೆಯಿದೆ. ಇದೇ ವೇಳೆ ಬಡವರ ಪರವಾಗಿಯೂ ಈ ಬಜೆಟ್ ಇರರಲಿದ್ದು, ಈ ಮೂಲಕ ಮತದಾರರನ್ನು ಸೆಳೆಯುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Budget 2023: ಆರ್ಥಿಕ ಅಸ್ಥಿರತೆಯ ಮಧ್ಯೆ ಜಗತ್ತು ಭಾರತದ ಬಜೆಟ್ನತ್ತ ನೋಡುತ್ತಿದೆ: ನರೇಂದ್ರ ಮೋದಿ
ಚುನಾವಣೆ ದೃಷ್ಟಿಯಿಂದ ಮಹತ್ವ ಪಡೆದಿದೆ
ಕರ್ನಾಟಕದಲ್ಲಿ ಬಿಜೆಪಿಯ ಹಿರಿಯ ನಾಯಕರೊಬ್ಬರು ಮಾತನಾಡಿ, ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪಕ್ಷದ ರಾಜ್ಯ ಮತ್ತು ಕೇಂದ್ರ ನಾಯಕರ ಮೇಲೆ ಒತ್ತಡವಿದೆ. “ಕೇಂದ್ರ ಬಜೆಟ್ನಲ್ಲಿ ಖಂಡಿತವಾಗಿಯೂ ಕರ್ನಾಟಕಕ್ಕೆ ದೊಡ್ಡ ಘೋಷಣೆಗಳನ್ನು ಮಾಡುತ್ತಾರೆ. ಹಿಂದಿನ ವರ್ಷಗಳಲ್ಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಿಗೆ ಉತ್ತಮ ಹಂಚಿಕೆಗಳಾಗಿದ್ದು, ಆಗ ಅಲ್ಲಿನ ಚುನಾವಣೆ ನಡೆಯುತ್ತಿದ್ದವು. ಇನ್ನು ನಾವು ರಾಜ್ಯಕ್ಕೆ ದೊಡ್ಡ ಕೊಡುಗೆಗಳನ್ನು ನೀಡದಿದ್ದರೆ, ಅದು ವಿರೋಧ ಪಕ್ಷಗಳಿಗೆ ನಮ್ಮನ್ನು ಗುರಿಯಾಗಿಸಲು ಕಾರಣ ನೀಡಿದಂತಾಗುತ್ತದೆ ”ಎಂದು ಅವರು ಹೇಳಿದರು.
ಬಜೆಟ್ ಸಂಬಂಧಿತ ಕ್ಷಣ ಕ್ಷಣದ ಮಾಹಿತಿಯ ಲೈವ್ ಬ್ಲಾಗ್: ನಿರ್ಮಲಾ ಆಯವ್ಯಯದ ಮೇಲೆ ಎಲ್ಲರ ಕಣ್ಣು
ಬಜೆಟ್ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲಿದೆ: ಬಿ. ಸಿ. ಪಾಟೀಲ್
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಈ ವರ್ಷವನ್ನು ‘ಅಂತರರಾಷ್ಟ್ರೀಯ ರಾಗಿ ವರ್ಷ’ ಎಂದು ಘೋಷಿಸಲಾಗಿದ್ದು, ಕರ್ನಾಟಕವು ರಾಗಿ ಕ್ಷೇತ್ರದಲ್ಲಿ ಪ್ರವರ್ತಕವಾಗಿರುವುದರಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನಿರೀಕ್ಷಿಸಬಹುದು ಎಂದಿದ್ದಾರೆ. ಆದಾಗ್ಯೂ, ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಹೊಸದೇನೂ ಸಿಗುವ ಸಾಧ್ಯತೆ ಇಲ್ಲ. ಬದಲಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ದೊಡ್ಡ ಯೋಜನೆಗಳಿಗೆ ನಿಧಿ ಹಂಚಿಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂಬುವುದು ಹಲವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: Budget 2023: ಜನ ಸಾಮಾನ್ಯರಿಗೆ ಬಿಗ್ ಶಾಕ್! ಬಜೆಟ್ ನಂತರ ಇವುಗಳ ಬೆಲೆ ಹೆಚ್ಚಾಗುತ್ತಾ?
ಎಫ್ಕೆಸಿಸಿಐನ ರಾಜ್ಯ ತೆರಿಗೆ ಸಮಿತಿಯ ಸದಸ್ಯ ಬಿಟಿ ಮನೋಹರ್ ಅವರ ಪ್ರಕಾರ, ಸಿಎಂ ಬೊಮ್ಮಾಯಿ ಅವರು ಈ ಅವಧಿಯ ಕೊನೆಯ ಬಜೆಟ್ ಅನ್ನು ಮಂಡಿಸುವುದರಿಂದ ಬಜೆಟ್ ನಿರ್ಣಾಯಕವಾಗಿದೆ. ಅತಿ ಹೆಚ್ಚು ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. “ವಿವಿಧ ಜಿಲ್ಲೆಗಳು ಮತ್ತು ಪಟ್ಟಣಗಳಲ್ಲಿ ಮೆಟ್ರೋ, ಉಪನಗರ ರೈಲು ಅಥವಾ ಮೆಗಾ ನೀರಾವರಿ ಯೋಜನೆಗಳಂತಹ ವಿವಿಧ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರವು ದೊಡ್ಡ ಆರ್ಥಿಕ ಬೆಂಬಲವನ್ನು ನಿರೀಕ್ಷಿಸುತ್ತದೆ. ಕರ್ನಾಟಕದ ಟೈರ್-II ಮತ್ತು ಟೈರ್-III ನಗರಗಳ ಅಭಿವೃದ್ಧಿಗೆ ಹಣವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಒಟ್ಟಾರೆಯಾಗಿ ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ರಾಷ್ಟ್ರೀಯ ಯೋಜನೆಗಳಾಗಿ ಎತ್ತಿನಹೊಳೆ, ಮಹದಾಯಿ ಪ್ರಾಜೆಕ್ಟ್, 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಬೆಂಬಲ ನಿರೀಕ್ಷೆ ಇದೆ. ಅಲ್ಲದೇ ಧಾರವಾಡ-ಕಿತ್ತೂರು-ಬೆಳಗಾವಿ ರೈಲ್ವೆ, ಹುಬ್ಬಳ್ಳಿ-ಅಂಕೋಲಾ ಸೇರಿ ರಾಜ್ಯದ ರೈಲ್ವೆ ಯೋಜನೆಗಳಿಗೆ ವೇಗ ಸಿಗುವ ಸಾಧ್ಯತರ ಇದೆ. ಬೆಂಗಳೂರು ಮೆಟ್ರೋ ವಿಸ್ತರಣೆಗೆ ಹಣಕಾಸಿನ ನೆರವು, ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಅನುದಾನ, ಕರ್ನಾಟಕಕ್ಕೂ ಫಿನ್ಟೆಕ್ ಸಿಟಿ ಯೋಜನೆ ವಿಸ್ತರಣೆ, ಸ್ಮಾರ್ಟ್ ಸಿಟಿಗಳ ಪಟ್ಟಿಗೆ ರಾಜ್ಯದ ಇನ್ನಷ್ಟು ನಗರಗಳು ಸೇರ್ಪಡೆಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ