ಕೊಡಗು: ಅರಳು ಹುರಿದಂತೆ ಪಟಪಟನೆ ಸಸಿ ಕೀಳುವುದೇನು, ಸಸಿ ನಾಟಿ (Plant) ಮಾಡುವುದೇನು. ಪೆನ್ನು ಹಿಡಿದು ಬರೆಯುವ ಈ ಮಕ್ಕಳು (Children) ಏನು ಮಾಡಲು ಸಾಧ್ಯ ಎಂದು ಊಹಿಸಿದ್ದವರು ನಿಬ್ಬೆರಗಾಗುವಂತೆ ಗದ್ದೆನಾಟಿ ಮಾಡುತ್ತಿದ್ದರು. ಕೊಡಗು (Kodagu) ಜಿಲ್ಲೆ ಕುಶಾಲನಗರ ತಾಲೂಕಿನ ಕೂಡುಮಂಗಳೂರು (Koodumangaluru) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು (koodlooru) ಗ್ರಾಮದಲ್ಲಿ ಗ್ರಾಮಸ್ಥರೇ ಹುಬ್ಬೇರಿಸುವಂತೆ ವಿದ್ಯಾರ್ಥಿಗಳು (Students) ಗದ್ದೆ ನಾಟಿ ಮಾಡಿದ್ದರು. ಶಾಲೆಯಲ್ಲಿ (School) ಪೆನ್ನು ಹಿಡಿದು ಓದಿ ಬರೆಯುತ್ತಿದ್ದ ಪುಟ್ಟ ಕೈಗಳು ಪಟಪಟನೆ ಭತ್ತದ ಸಸಿಗಳನ್ನು ಕಿತ್ತು, ನೋಡು ನೋಡುತ್ತಿದ್ದಂತೆಯೇ ನಾಟಿ ಕಾರ್ಯ ಮಾಡಿದ್ದು ನುರಿತ ಕೃಷಿ ಕಾರ್ಮಿಕರನ್ನು (Agriculture Worker) ನಾಚಿಸುವಂತಿತ್ತು. ಈ ಅಚ್ಚರಿಗೆ ಕಾರಣವಾದವರು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು.
ಕೂಡ್ಲೂರು ಗ್ರಾಮದ ಪ್ರಗತಿಪರ ಕೃಷಿಕರಾದ ಕೆ.ಎಸ್.ರಾಜಾಚಾರಿ ಅವರ ಭತ್ತದ ಗದ್ದೆಗೆ ಇಳಿದ ವಿದ್ಯಾರ್ಥಿಗಳು ಭತ್ತದ ಪೈರು ಹಿಡಿದು ನಾಟಿ ಮಾಡಿದ್ದು ಜನರ ಗಮನ ಸೆಳೆಯಿತು.
ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಭತ್ತದ ಗದ್ದೆ ನಾಟಿ ಕಾರ್ಯದ ಪ್ರಾತ್ಯಕ್ಷಿಕೆ ಸಂಭ್ರಮ, ಸಡಗರದಿಂದ ನಡೆಯಿತು. ಶಾಲೆಯ ಬಳಿ ಕಾವೇರಿ ನದಿದಂಡೆಯ ಮೇಲೆ ಕೂಡ್ಲೂರು ಗ್ರಾಮದ ಕೆ.ಎಸ್.ರಾಜಾಚಾರಿ ಅವರು ಭತ್ತದ ನಾಟಿಗಾಗಿ ಸಿದ್ಧತೆ ಮಾಡಿಕೊಂಡು, ನಾಟಿ ಕಾರ್ಯದಲ್ಲಿ ತೊಡಗಿದ್ದರು.
ಸಮವಸ್ತ್ರದಲ್ಲಿ ಕೃಷಿ ಕೆಲಸ
ಶಾಲಾ ಅವಧಿಯ ನಂತರ 80 ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಸಮವಸ್ತ್ರದಲ್ಲಿಯೇ ಬಂದು ನಾಟಿ ಮಾಡಿದರು. ಆ ಮೂಲಕ ಭತ್ತದ ಬೆಳೆ ಕ್ಲಿಷ್ಟ ಎಂದು ಕೈಬಿಟ್ಟಿರುವ ರೈತರಿಗೆ ಒಂದಷ್ಟು ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಇದನ್ನೂ ಓದಿ: Husband Murder: ಗಂಡನನ್ನ ಬೆಂಗಳೂರಲ್ಲಿ ಕೊಲೆ ಮಾಡಿ ಮಂಡ್ಯದಲ್ಲಿ ಸಿಕ್ಕಿ ಬಿದ್ದ ಖತರ್ನಾಕ್ ಹೆಂಡತಿ!
ಮಕ್ಕಳೊಂದಿಗೆ ಗದ್ದೆಗಿಳಿದು ನಾಟಿ ಕಾರ್ಯದಲ್ಲಿ ಭಾಗಿಯಾಗಿ ನಾಟಿ ಮಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮ್ಕುಮಾರ್ ಮಾತನಾಡಿ, ಮಕ್ಕಳಿಗೆ ಶಾಲೆಯೊಳಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ. ಆದರೆ, ಕೃಷಿಯ ಅನುಭವವನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಗದ್ದೆಯಲ್ಲಿ ಭತ್ತದ ನಾಟಿ ಕಾರ್ಯದ ಯೋಜನೆ ರೂಪಿಸಿದ್ದು, ಮಕ್ಕಳೆಲ್ಲರೂ ಸ್ವಪ್ರೇರಣೆಯಿಂದ ಬಂದು ಕ್ರೀಯಾಶೀಲರಾಗಿ ಭಾಗವಹಿಸಿದ್ದು ಕೃಷಿ ಬದುಕನ್ನು ಪರಿಚಯಿಸಲು ಸುಲಭವಾಯಿತು. ಮಕ್ಕಳು ಪಠ್ಯದೊಂದಿಗೆ ಇಂತಹ ಕೃಷಿ ಬದುಕು ಮತ್ತು ರೈತರ ಜೀವನ ಕ್ರಮ ತಿಳಿಯಲು ಅನುಕೂಲವಾಗಿದೆ ಎಂದರು.
ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಒಟ್ಟಿನಲ್ಲಿ ಸದಾ ಶಾಲೆ, ಪಾಠ ಕಲಿಕೆ ಎಂದು ಅದೇ ಗುಂಗಿನಲ್ಲಿ ಇರುತ್ತಿದ್ದ ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಬಿದ್ದೆದ್ದು, ಕೆಸರು ಮೆದ್ದಿಕೊಂಡು ನಾಟಿ ಮಾಡಿ ಜೊತೆಗೆ ಆಟವಾಡಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ನಾಟಿ ಕಾರ್ಯ ಮುಗಿಸಿ ಹಿಂದಿರುತ್ತಿದ್ದ ವಿದ್ಯಾರ್ಥಿಗಳ ಕಣ್ಗಳಲ್ಲಿ ತಾವು ನೆಟ್ಟಿರುವ ಭತ್ತದ ಸಸಿಗಳು ಮುಂದೆ ಹೇಗೆ ಫಲ ನೀಡುತ್ತವೆ ಎಂಬ ನಿರೀಕ್ಷೆ, ಕಾತುರ ಎದ್ದು ಕಾಣುತ್ತಿತ್ತು. ನನಗೆ ಕೃಷಿ ವಿಜ್ಞಾನಿಯಾಗಬೇಕು ಎಂಬ ಆಸೆಯಿದೆ. ನಾವೆಲ್ಲಾ ಮಹಿಳಾ ರೈತರ ಜತೆಗೂಡಿ ನಾಟಿ ಮಾಡಿದ್ದು ಉತ್ತಮ ಅನುಭವ ನೀಡಿದೆ. ಮುಂದಿನ ನಮ್ಮ ವಿದ್ಯಾಭ್ಯಾಸಕ್ಕೆ ಇದು ಅತ್ಯಂತ ಸಹಕಾರಿಯಾಗಿದೆ ಶಾಲಾ ನಾಯಕಿ ಸಂಜನಾ ಹರ್ಷ ವ್ಯಕ್ತಪಡಿಸಿದರು.
ಸಂತೋಷ ಹಂಚಿಕೊಂಡ ವಿದ್ಯಾರ್ಥಿಗಳು
ಎಲ್ಲರೂ ಸರ್ಕಾರಿ ಕೆಲಸಗಳಿಗೆ ಹೋದರೆ ಕೃಷಿ ಚಟುವಟಿಕೆ ನಡೆಯುವುದಾದರೂ ಹೇಗೆ? ನಾನು ರಜೆ ದಿನಗಳಲ್ಲಿ ಪೋಷಕರೊಂದಿಗೆ ನಮ್ಮ ಗದ್ದೆ ನಾಟಿ ನಡಲು ಹೋಗುತ್ತಿದ್ದೆ. ಇಂದು ನಾನು ಎಲ್ಲಾ ಸ್ನೇಹಿತರೊಂದಿಗೆ ಗದ್ದೆಗಿಳಿದು ನಾಟಿ ಮಾಡಿದ್ದು ನನಗೆ ಬಹಳ ಖುಷಿ ನೀಡಿತು ಎಂದು ವಿದ್ಯಾರ್ಥಿ ಸತೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ