• ಹೋಂ
  • »
  • ನ್ಯೂಸ್
  • »
  • business
  • »
  • Narendra Modi: ಕೃಷಿ ಕಾಯ್ದೆ ಬಗ್ಗೆ ಮನಮೋಹನ್ ಸಿಂಗ್ ಹೇಳಿದ್ದನ್ನೇ ನಾವು ಮಾಡಿದ್ದೇವೆ; ಕಾಂಗ್ರೆಸ್​ಗೆ ಪ್ರಧಾನಿ ಮೋದಿ ಚಾಟಿ

Narendra Modi: ಕೃಷಿ ಕಾಯ್ದೆ ಬಗ್ಗೆ ಮನಮೋಹನ್ ಸಿಂಗ್ ಹೇಳಿದ್ದನ್ನೇ ನಾವು ಮಾಡಿದ್ದೇವೆ; ಕಾಂಗ್ರೆಸ್​ಗೆ ಪ್ರಧಾನಿ ಮೋದಿ ಚಾಟಿ

ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ

ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ

Narendra Modi in Rajya Sabha: ನೂತನ ಕೃಷಿ ಕಾನೂನಿನಲ್ಲಿ ಸಮಸ್ಯೆ ಏನಿದೆ? ಎಂಬುದನ್ನು ಚರ್ಚಿಸಿ, ಆ ಸಮಸ್ಯೆಯನ್ನು ಬಗೆಹರಿಸೋಣ. ರೈತರ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ರಾಜಕೀಯಕ್ಕಾಗಿ ರೈತರನ್ನು ಯಾರೂ ಕತ್ತಲಿಗೆ ತಳ್ಳಬಾರದು. ಪ್ರತಿಭಟನಾಕಾರರು ಧರಣಿ ಕೈಬಿಟ್ಟು ಮಾತುಕತೆಗೆ ಬನ್ನಿ ಎಂದು ಮೋದಿ ಆಹ್ವಾನಿಸಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ (ಫೆ. 8): ಎಲ್ಲ ಸರ್ಕಾರಗಳೂ ಕೃಷಿ ಸುಧಾರಣೆಯ ಬಗ್ಗೆ ಮಾತನಾಡಿವೆ. ಆದರೆ, ಯಾರಿಗೂ ಕಾಯ್ದೆಗೆ ತಿದ್ದುಪಡಿ ತರಲು ಸಾಧ್ಯವಾಗಿರಲಿಲ್ಲ. ಈಗ ನಾವು ದಿಟ್ಟತನದಿಂದ ಹೊಸ ಕೃಷಿ ಕಾಯ್ದೆ ಜಾರಿಗೊಳಿಸಿದ್ದೇವೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, 1930ರ ಕೃಷಿ ಕಾನೂನಿನಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಕೃಷಿ ಕಾಯ್ದೆ ರೈತರನ್ನು ತಮಗೆ ಬೇಕಾದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದಂತೆ ತಡೆಯುತ್ತಿವೆ. ಕೃಷಿ ಕ್ಷೇತ್ರದ ಏಳಿಗೆಗೆ ಈ ಕಾಯ್ದೆಯಿಂದ ತೊಡಕು ಉಂಟಾಗುತ್ತಿದೆ. ಹೀಗಾಗಿ, ಈ ಕಾಯ್ದೆಯನ್ನು ತೆಗೆದುಹಾಕುತ್ತೇವೆ ಎಂದು ಭಾಷಣ ಮಾಡಿದ್ದರು. ಆದರೆ, ಅವರ ಅಧಿಕಾರಾವಧಿಯಲ್ಲಿ ಕೃಷಿ ಕಾಯ್ದೆಗೆ ತಿದ್ದುಪಡಿ ತರಲು ಸಾಧ್ಯವಾಗಲೇ ಇಲ್ಲ. ಮನಮೋಹನ್ ಸಿಂಗ್ ಹೇಳಿದ್ದನ್ನೇ ಈಗ ಮೋದಿ ಮಾಡಿದ್ದಾರೆ ಎಂದು ನೀವು ಹೆಮ್ಮೆ ಪಡಬೇಕು. ಆದರೂ ಕಾಂಗ್ರೆಸ್​ನವರು ಈಗ ಯಾಕೆ ಯೂಟರ್ನ್ ಹೊಡೆಯುತ್ತಿದ್ದೀರ? ಎಂದು ವಿಪಕ್ಷ ಕಾಂಗ್ರೆಸ್​ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಟಿ ಬೀಸಿದ್ದಾರೆ.


ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ವಿರೋಧ ಪಕ್ಷಗಳ ವಿರೋಧದ ಬಗ್ಗೆ ಇಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ, ಚರ್ಚೆಗಳು ನಡೆದವೇ ಹೊರತು ಅದರ ಉದ್ದೇಶದ ಬಗ್ಗೆ ಎಲ್ಲಿಯೂ ಚರ್ಚೆಯಾಗಿಲ್ಲ ಎಂಬುದೇ ದುರಂತ ಸಂಗತಿ. ರೈತರ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ರಾಜಕೀಯಕ್ಕಾಗಿ ರೈತರನ್ನು ಯಾರೂ ಕತ್ತಲಿಗೆ ತಳ್ಳಬಾರದು. ಪ್ರತಿಭಟನಾಕಾರರು ಧರಣಿ ಕೈಬಿಟ್ಟು ಮಾತುಕತೆಗೆ ಬನ್ನಿ  ಎಂದು ಮೋದಿ ಆಹ್ವಾನಿಸಿದ್ದಾರೆ.


ಕೃಷಿ ಕಾಯ್ದೆಗಳ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿದ್ದು ಆಶ್ಚರ್ಯವೇನಲ್ಲ. ಒಂದು ಮನೆಯೊಳಗಿನ ಸದಸ್ಯರಲ್ಲೇ ಹಲವು ಅಭಿಪ್ರಾಯಗಳಿರುತ್ತವೆ. ಅಂಥದ್ದರಲ್ಲಿ ದೇಶದ ಕೋಟ್ಯಂತರ ಜನರಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಅಸಹಜವೇನಲ್ಲ. ಆದರೆ, ನಾವು ಜಾರಿಗೆ ತಂದಿರುವ ಕಾನೂನಿನಲ್ಲಿ ಕೊರತೆ ಏನಿದೆ? ಸಮಸ್ಯೆ ಏನಿದೆ? ಎಂಬುದನ್ನು ಚರ್ಚೆ ಮಾಡಿ. ಒಟ್ಟಿಗೇ ಕುಳಿತು ಚರ್ಚಿಸಿ, ಆ ಸಮಸ್ಯೆಯನ್ನು ಬಗೆಹರಿಸೋಣ. ನಾವು ಮುಂದೆ ಹೋಗಬೇಕೆಂಬ ಸ್ವಾರ್ಥದಿಂದ ದೇಶವನ್ನು ಹಿಂದಕ್ಕೆ ಎಳೆಯುವುದು ಸರಿಯಲ್ಲ ಎಂದು ವಿಪಕ್ಷಗಳ ವಿರುದ್ಧ ಮೋದಿ ಆಕ್ರೋಶ ಹೊರಹಾಕಿದ್ದಾರೆ.


ವಿಪಕ್ಷಗಳು ನಮ್ಮ ಸರ್ಕಾರ ಅಮೆರಿಕದ ಕೈಗೊಂಬೆ ಎಂದು ಟೀಕಿಸಿದವು. ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ನಾವು ಈಗ ಬೇರೆ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಕೃಷಿ ಕ್ಷೇತ್ರದಲ್ಲಿ ಭಾರತ ಮುಂಚೂಣಿಯತ್ತ ಸಾಗಿದೆ. ಕೊರೋನಾ ಕಾಲದಲ್ಲಿ ನಮ್ಮ ರೈತರು ಅತಿಹೆಚ್ಚು ಬೆಳೆ ಬೆಳೆದಿದ್ದಾರೆ.



ಭಾರತದಲ್ಲಿ ಶೇ. 88ರಷ್ಟು ರೈತರಿಗೆ 2 ಹೆಕ್ಟೇರ್​ಗಿಂತ ಕಡಿಮೆ ಜಮೀನಿದೆ. ನಮ್ಮ ಸರ್ಕಾರ ಬಡವರಿಗಾಗಿ ಮತ್ತು ಬಡವರಿಗೋಸ್ಕರ ಇರುವ ಸರ್ಕಾರವಾಗಿದೆ. ನಾನು ಯಾರನ್ನೂ ದಾರಿ ತಪ್ಪಿಸುವ ಕೆಲಸ ಮಾಡಿಲ್ಲ. ನಾವು ಮುಂದಿನ ಪೀಳಿಗೆಯ ಬಗ್ಗೆಯೂ ಯೋಚನೆ ಮಾಡಬೇಕಾಗಿದೆ. ನಾವು ಪ್ರತಿ ರೈತರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಕೊಟ್ಟಿದ್ದೇವೆ. ಮೀನುಗಾರರಿಗೂ ಕಿಸಾನ್ ಕಾರ್ಡ್ ಕೊಟ್ಟಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದೇವೆ. ಕಿಸಾನ್ ಭೀಮ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದೇವೆ. ಸಣ್ಣ ರೈತರಿಗೆ ಮೊದಲ ಬಾರಿಗೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಸಾಲ ಮನ್ನಾ ಯೋಜನೆಯ ಸತ್ಯವೇನೆಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್​ ಸೇರಿ ಎಲ್ಲರಿಗೂ ಕೃಷಿ ಸುಧಾರಣೆಯ ಉದ್ದೇಶವಿತ್ತು. ಆದರೆ, ಅವರಿಗೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಈಗ ನಮ್ಮ ಸರ್ಕಾರ ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ ಎಂದು ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.


ಇಡೀ ವಿಶ್ವವೇ ಭಾರತದ ಮೇಲೆ ವಿಶ್ವಾಸ ಇಟ್ಟುಕೊಂಡಿದೆ. ನಾವು ನಮ್ಮ ಮೇಲಿಟ್ಟ ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಕೊರೋನಾ ಲಸಿಕೆ ಭಾರತವನ್ನು ವಿಶ್ವದಲ್ಲೇ ಅಗ್ರಸ್ಥಾನದಲ್ಲಿ ನಿಲ್ಲಿಸಿದೆ. ಕೊರೋನಾ ವಿರುದ್ಧದ ಭಾರತದ ಜಯ ಕೇವಲ ಬಿಜೆಪಿಗೆ ಸೇರಿದ್ದಲ್ಲ. ಇದು ಇಡೀ ಭಾರತಕ್ಕೆ ಸಿಕ್ಕ ಯಶಸ್ಸಾಗಿದೆ. ಇಡೀ ವಿಶ್ವವೇ ಈಗ ಸವಾಲುಗಳನ್ನು ಎದುರಿಸುತ್ತಿದೆ. ನಾವು ಕೊರೋನಾಗೆ ಸ್ವದೇಶಿ ಲಸಿಕೆಗಳನ್ನು ಕಂಡು ಹಿಡಿದು, ಬೇರೆ ದೇಶಗಳಿಗೂ ಪೂರೈಕೆ ಮಾಡಿದ್ದೇವೆ. ಎಲ್ಲ ದೇಶಗಳ ಗಮನ ಈಗ ಭಾರತದ ಕಡೆಗಿದೆ. ನಮ್ಮನ್ನು ಗಮನಿಸುತ್ತಿರುವ ಇತರೆ ದೇಶಗಳಿಗೆ ನಾವು ಮಾದರಿಯಾಗುವಂತೆ ನಡೆದುಕೊಳ್ಳಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.



ಕೇಂದ್ರ ಸರ್ಕಾರ ಕೊರೋನಾವನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳ ಬಗ್ಗೆ ವಿರೋಧ ಪಕ್ಷಗಳು ಲೇವಡಿ ಮಾಡಿದ್ದವು. ನಮ್ಮ ಮನೋಬಲವನ್ನು ಕುಗ್ಗಿಸಲು ಪ್ರಯತ್ನ ನಡೆಸಿದ್ದವು. ಆದರೆ, ವಿಶ್ವಕ್ಕೆ ಅತಿಹೆಚ್ಚು ಕೊರೋನಾ ಲಸಿಕೆ ನೀಡಿದ ದೇಶವೆಂಬ ಹೆಗ್ಗಳಿಕೆಯನ್ನು ಭಾರತ ಹೊಂದಿದೆ. ಫಾರ್ಮಸಿ ಕ್ಷೇತ್ರದಲ್ಲಿ ಭಾರತ ಭಾರೀ ಸಾಧನೆ ಮಾಡಿದೆ. ವಿಪಕ್ಷಗಳು ನಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಬಾರದು. ಪ್ರಜಾಪ್ರಭುತ್ವದ ರಕ್ಷಣೆ ಬಗ್ಗೆ ಹಲವರು ನಮಗೆ ಉಪದೇಶ ಮಾಡಿದರು. ಆದರೆ, ಆ ಬಗ್ಗೆ ನಮಗೆ ಪಾಠ ಮಾಡುವ ಅಗತ್ಯವಿಲ್ಲ. ನಮಗೆ ಪ್ರಜಾಪ್ರಭುತ್ವದ ರಕ್ಷಣೆಯ ಜವಾಬ್ದಾರಿ ಜಾಸ್ತಿಯೇ ಇದೆ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಕ್ಷಣಾ ಕ್ಷೇತ್ರದಲ್ಲಿ ಭಾರತ ಬಲಾಢ್ಯವಾಗಿದೆ. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟೈಕ್ ಮೂಲಕ ನಾವು ನಮ್ಮ ಸೇನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೇವೆ. ಎಲ್ಲ ಕ್ಷೇತ್ರಗಳಲ್ಲೂ ಭಾರತ ಮುಂಚೂಣಿಯಲ್ಲಿದೆ. ಭಾರತ ಬಹಳ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಭಾರತದ ಆರ್ಥಿಕ ಸಾಮರ್ಥ್ಯವೂ ಹೆಚ್ಚಾಗಿದೆ. ಭಾರತದಲ್ಲಿ ಇಂಟರ್​ನೆಟ್​ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಮೊಬೈಲ್ ಉತ್ಪಾದನೆಯಲ್ಲಿ ಭಾರತಕ್ಕೆ ವಿಶ್ವದಲ್ಲೇ 2ನೇ ಸ್ಥಾನವಿದೆ. ಭಾರತೀಯರು ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನವನ್ನು ಬಳಸತೊಡಗಿದ್ದಾರೆ. ಈ ಮೂಲಕ ಡಿಜಿಟಲ್ ಇಂಡಿಯಾದ ಕನಸು ನನಸಾಗಿದೆ ಎಂದು ವಿರೋಧ ಪಕ್ಷಗಳಿಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.

top videos
    First published: