ವಿಜಯಪುರ (ಡಿ. 19): ಬಸವನಾಡು ಹೇಳಿ ಕೇಳಿ ಬರಕ್ಕೆ ಹೆಸರವಾಸಿಯಾದರೂ ಕೆಲವು ಬಾರಿ ಭಾರಿ ಮಳೆಯಿಂದ ಇಲ್ಲಿನ ರೈತರು ಸಂಕಷ್ಟವನ್ನು ಎದುರಿಸುವುದು ಮಾಮೂಲಾಗಿದೆ. ಈ ಬರದ ನಾಡಿನಲ್ಲಿ ಕಡಲೆ ಬಿತ್ತನೆ ಹಿಂಗಾರಿನಲ್ಲಿ ರೈತರ ಕೃಷಿಗೆ ಹೇಳಿ ಮಾಡಿಸಿದ ಬೆಳೆ. ಆದರೆ, ಈ ಕಡಲೆ ಸಮೃದ್ಧವಾಗಿ ಬೆಳೆಯಬೇಕೆಂದರೆ ಅದರ ನಿರ್ವಹಣೆಯೂ ಅಷ್ಟೇ ಮುಖ್ಯ. ಈ ಕಡಲೆ ನಿರ್ವಹಣೆಯಲ್ಲಿ ಕುಡಿ ಚಿವುಟುವುದು ಪ್ರಮುಖ ಘಟ್ಟ. ಹೀಗೆ ಕುಡಿ ಚಿವುಟುವುದರಿಂದ ಬೆಳೆ ಸಮುೃದ್ಧವಾಗಿ ಬೆಳೆಯುವುದಷ್ಟೇ ಅಲ್ಲ, ಕಾಯಿಗಳೂ ಗುಣಮಟ್ಟದಲ್ಲಿ ಬೆಳೆಯುತ್ತವೆ. ಆದರೆ, ಕಡಲೆ ಬಿತ್ತಿದ ನಂತರ 30 ರಿಂದ 25 ದಿನಗಳ ಒಳಗೆ ಈ ಕಡಲೆ ಕುಡಿ ಚಿವುಟಲು ಕಾರ್ಮಿಕರ ಸಮಸ್ಯೆ ರೈತರಿಗೆ ತಲೆನೋವು ತರುತ್ತಿದೆ. ಒಂದು ಎಕರೆಯಲ್ಲಿ ಕುಡಿ ಚಿವುಟಲು ಒಂದು ದಿನಕ್ಕೆ ಕನಿಷ್ಠ ನಾಲ್ಕೈದು ಜನ ಬೇಕು. ಇವರಿಗೆ ಸುಮಾರು ರೂ. 1200 ರಿಂದ ರೂ. 1500 ಕೂಲಿ ಹಣ ನೀಡಬೇಕಾಗುತ್ತದೆ. ಕಾರ್ಮಿಕರೂ ಅಷ್ಟೇ, ಕಡಲೆ ಗಿಡಗಳು ಅಷ್ಟೋಂದು ಎತ್ತರವಾಗಿ ಬೆಳಯದಿರುವ ಹಿನ್ನೆಲೆಯಲ್ಲಿ ಕುಳಿತುಕೊಂಡು ಬೆನ್ನು ಬಾಗಿಸಿ ಚಿವುಟುವುದರಿಂದ ಅವರಿಗೆ ಬೆನ್ನು ನೋವೂ ಹೆಚ್ಚಾಗಿ ಬರುತ್ತದೆ. ಹೀಗಾಗಿ ಕಡಲೆ ಕುಡಿ ಚಿವುಟಲು ಕಾರ್ಮಿಕರು ಬರಲು ಹಿಂಜರಿಯುತ್ತಾರೆ.
ಈ ಸಂಕಷ್ಟ ಅರಿತ ಯುವ ಕೃಷಿ ವಿಜ್ಞಾನಿ ಗಿರೀಶ ಭದ್ರಗೊಂಡ ಹೊಸ ಸಲಕರಣೆಯೊಂದನ್ನು ಸಂಶೋಧಿಸಿದ್ದಾರೆ. ಅದರ ಹೆಸರು 'ಕಡಲೆ ಕುಡಿ ಚಿವುಟಿ ಕುಡಿ' ಸಂಗ್ರಹಿಸಿರುವ ಸೌರ ಚಾಲಿತ ಯಂತ್ರ. ಇದರ ಬೆಲೆ ಕೇವಲ ರೂ. 8000. ಈ ಯಂತ್ರವನ್ನು ಒಬ್ಬನೇ ವ್ಯಕ್ತಿ ತಲೆಗೊಂದು ಹೆಲ್ಮೇಟ್ ಅದರ ಮೇಲೆ ಸೌರಫಲಕ ಹಾಕಿಕೊಂಡು ಕೈಯಲ್ಲಿ ಈ ಯಂತ್ರ ಹಿಡಿದು ಮುಂದೆ ಸಾಗಿದರೆ ಸಾಕು. ಕಡಲೆ ಕುಡಿಯನ್ನು ಈ ಯಂತ್ರ ತಂತಾನೆ ಕತ್ತರಿಸುತ್ತದೆ. ಕೈಯಲ್ಲಿರುವ ಹ್ಯಾಂಡಲ್ ನಲ್ಲಿ ಅಳವಡಿಸಲಾಗಿರುವ ಬಟನ್ ನ್ನು ಬೇಕಾದಾಗ ಅದುಮಿದರೆ ಸ್ಟಾರ್ಟ್ ಬೇಡವೆಂದರ್ ಬಂದ್ ಕೂಡ ಮಾಡಬಹುದಾಗಿದೆ. ಅಷ್ಟೇ ಅಲ್ಲ, ಹೀಗೆ ಚಿವುಟಿದ ಕುಡಿಯನ್ನು ಇದೇ ಯಂತ್ರದಲ್ಲಿ ಸಂಗ್ರಹಿಸಿ ಅದನ್ನು ಸೊಪ್ಪಿನ ರೂಪದಲ್ಲಿಯೂ ಮಾರಾಟ ಮಾಡಬಹುದಾಗಿದೆ. ಒಬ್ಬ ರೈತ ಈ ಯಂತ್ರ ಬಳಸಿ ಒಂದು ದಿನ ಮೂರು ಎಕರೆ ಕುಡಿ ಚಿವುಟಬಹುದಾಗಿದೆ. ಅಷ್ಟೇ ಅಲ್ಲ, ಇದರಿಂದ ಶೇ. 15 ರಿಂದ ಶೇ. 20 ರಷ್ಟು ಇಳವರಿ ಹೆಚ್ಚಾಗುತ್ತದೆ. ಮಾತ್ರವಲ್ಲ, ಹೀಗೆ ಕುಡಿ ಚಿವುಟುವುದರಿಂದ ಕೀಟಗಳು ಇಟ್ಟಿರುವ ಮೊಟ್ಟೆಗಳೂ ಎಲೆಯ ಸಮೇತ ಕತ್ತರಿಸಿ ಹೋಗುವುದರಿಂದ ಕೀಟಬಾಧೆಯನ್ನೂ ನಿಯಂತ್ರಿಸಬಹುದಾಗಿದೆ.
ಈಗಾಗಲೇ ಗಿರೀಶ ಭದ್ರಗೊಂಡ ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ತಾವು ಸಂಶೋಧಿಸಿರುವ ನೂತನ ಯಂತ್ರದ ಪ್ರದರ್ಶನ ನೀಡಿದ್ದು, ಈಗಾಗಲೇ ಬೇಡಿಕೆಯೂ ಬಂದಿದೆ. ಅಷ್ಟೇ ಅಲ್ಲ, 150ಕ್ಕೂ ಹೆಚ್ಚು ಯಂತ್ರಗಳನ್ನು ಸಿದ್ಧಪಡಿಸಿದ್ದು, 50ಕ್ಕೂ ಹೆಚ್ಚು ಸರಬರಾಜೂ ಆಗಿವೆ.
ಈ ಯಂತ್ರ ಈಗ ರೈತರನ್ನು ಆಕರ್ಷಿಸುತ್ತಿದ್ದು, ಅನ್ನದಾತರೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಇದರತ್ತ ಒಲವು ತೋರಿಸುತ್ತಿದ್ದಾರೆ. ಈ ಮೂಲಕ ಈ ನೂತನ ಯಂತ್ರ ಈಗ ರೈತರನ್ನು ಸೆಳೆಯುತ್ತಿದೆ ಎನ್ನುತ್ತಾರೆ ಸರಕಾರಿ ನಿವೃತ್ತ ನೌಕರ ಮತ್ತು ಕಡಲೆ ಬೆಳೆಗಾಗರ ಶಿವಾನಂದ ಕಲ್ಲಪ್ಪ ಪ್ರಭಾಕರ.
ಈ ಯಂತ್ರದ ಮತ್ತೋಂದು ವಿಶೇಷತೆಯೆಂದರೆ ಇದು ಕೇವಲ ಆರೇಳು ಕೆಜಿ ಭಾರ ಇರುವುದರಿಂದ ಮಹಿಳೆಯರೂ ಕೂಡ ಇದನ್ನು ಸುಲಭವಾಗಿ ಬಳಸಬಹುದಾಗಿದೆ. ಅಲ್ಲದೇ, ಈ ಕುಡಿ ಚಿವುಟುವಿಕೆಯಿಂದ ಬೆಳೆಗಳು ಅನಾವಶ್ಯಕವಾಗಿ ಬೆಳೆಯುವುದನ್ನು ತಡೆದು, ಭೂಮಿಯಲ್ಲಿರುವ ಪೋಷಕಾಂಶಗಳನ್ನು ಸದುಪಯೋಗ ಪಡಿಸಿಕೊಂಡು ಹೆಚ್ಚುವಳಿ ಇಳುವರಿಯನ್ನೂ ಪಡೆಯಬಹುದಾಗಿದೆ. ಕಡಲೆ ಎಲೆಗಳನ್ನು ಮಾರಾಟ ಮಾಡುವುದರಿಂದ ಪ್ರತಿ ವರ್ಷ ನಾಲ್ಕರಿಂದ ಐದು ಸಾವಿರ ಪ್ರತಿ ಎಕರೆಗೆ ಹಣ ಗಳಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ