ರಾಮನಗರ: ರೇಷ್ಮೆ ನಗರಿ (Silk City) ರಾಮನಗರ (Ramanagar) ಜಿಲ್ಲೆಯಲ್ಲೂ ಸಹ ಮಳೆ (Rain) ಸತತವಾಗಿ ಸುರಿಯುತ್ತಿರುವ ಹಿನ್ನಲೆ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು (Crop Loss), ರೈತರು (Farmers) ಇದೀಗ ಸಂಕಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ರೇಷ್ಮೆ ನಗರಿ ಅಕ್ಷರಶಃ ನಲುಗಿ ಹೋಗಿದೆ. ಜಿಲ್ಲೆಯ ಜೀವನಾಡಿಗಳಾದ ಕಣ್ವ, ಮಂಚನಬೆಲೆ, ಇಗ್ಗಲೂರು ಜಲಾಶಯಗಳು (Dam) ಮೈದುಂಬಿ ಹರಿಯುತ್ತಿದೆ. ಹಲವು ವರ್ಷಗಳಿಂದ ಮಳೆ ಇಲ್ಲದೇ ಕೊರಗುತ್ತಿದ್ದ ರೈತರಿಗೆ ಇದೀಗ ದೊಡ್ಡ ಮಟ್ಟದಲ್ಲಿ ಮಳೆಯಾಗಿದ್ದು, ಒಂದು ಕಡೆ ಸಂಭ್ರಮ, ಮತ್ತೊಂದು ಕಡೆ ಪ್ರವಾಹ (Flood) ಭೀತಿಯಿಂದ ಕೃಷಿ ಜಮೀನುಗಳಿಗೆ (Agriculture Lands) ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಜಲಾಶಯದ ನೀರಿನಿಂದ ಸೇತುವೆ ಮುಳುಗಡೆ
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು- ದಶವಾರ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಟ್ ಆಗಿದೆ. ಕಣ್ವ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರ ಬಿಟ್ಟ ಹಿನ್ನಲೆ ಹಲವು ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಸ್ಥಳೀಯ ಗ್ರಾಮಸ್ಥರು ಕಿಮೀ ಗಟ್ಟಲೇ ಸುತ್ತಾಡಿಕೊಂಡು ಓಡಾಡುವ ಅನಿವಾರ್ಯ ಉಂಟಾಗಿದೆ.
ವ್ಯಾಸರಾಯರ ಮಠಕ್ಕೆ ಜಲ ದಿಗ್ಬಂಧನ
ಅಬ್ಬೂರು ಗ್ರಾಮದ ವ್ಯಾಸರಾಯರ ಮಠಕ್ಕೆ ಜಲಧಿಗ್ಬಂದನ ಆಗಿದೆ. ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆ ಮಠದ ಸುತ್ತಾ ನೀರು ಆವರಿಸಿದ್ದು ಮಠ ಸಂಪೂರ್ಣವಾಗಿ ಜಲಾವೃತವಾಗಿದ್ದು, 3 ದಿನಗಳ ಕಾಲ ಮಠದಲ್ಲಿ ಪೂಜೆ ಪುನಸ್ಕಾರಕ್ಕೆ ಬ್ರೇಕ್ ಹಾಕಲಾಗಿದೆ.
ಇದನ್ನೂ ಓದಿ: Kodagu Rains: ವರುಣಾರ್ಭಟ; ಕಾವೇರಿಯ ರುದ್ರ ಪ್ರತಾಪ, ಸಂಪರ್ಕ ಕಡಿತ, ಮನೆ ಕುಸಿತ , ಜನಜೀವನ ಅಸ್ತವ್ಯಸ್ತ
ಅಪಾರ ಪ್ರಮಾಣದ ಬೆಳೆ ನಾಶ
ಇನ್ನೂ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಹಲವು ಕಡೆ ಬೆಳೆ ನಾಶವಾಗಿದೆ. ನೂರಾರು ಎಕರೆಯಲ್ಲಿ ಬೆಳೆದಿದ್ದ, ತೆಂಗು, ರೇಷ್ಮೆ, ಬಾಳೆ, ಸೀಮೆ ಹುಲ್ಲು ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಬೆಳೆಗಳು ಮಳೆರಾಯನ ಅಬ್ಬರಕ್ಕೆ ಕೊಚ್ಚಿಹೋಗಿದೆ. ಕೆಲವಡೆ ಕೆರೆಗಳು ಕೋಡಿ ಬಿದ್ದು, ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ಅಪಾರ ಪ್ರಮಾಣದ ಬೆಲೆ ಬಾಳುವ ವಸ್ತುಗಳು, ದಿನಸಿ ವಸ್ತುಗಳು ಸಂಪೂರ್ಣವಾಗಿ ನಾಶವಾಗಿದ್ದು, ರೈತರು, ಮನೆ ಕಳೆದುಕೊಂಡ ಕುಟುಂಬಸ್ಥರು ಸಂಕಷ್ಟದಲ್ಲಿದ್ದಾರೆ.
ವರುಣನ ಅಬ್ಬರಕ್ಕೆ ರೈತರ ಜಮೀನು ಮಾಯ, ಹಳ್ಳ ಸೃಷ್ಟಿ!
ಮಳೆ ಪ್ರಮಾಣ ತಗ್ಗಿದಂತೆಲ್ಲ ಮಳೆ ಅವಾಂತರ ಅನಾವರಣ ಆಗ್ತಿದೆ. ಧಾರಾಕಾರ ಮಳೆಗೆ ರಾಮನಗರ ತಾಲೂಕಿನ ಕೂಟಗಲ್ ಗ್ರಾಮದಲ್ಲಿ ಅಪಾರ ಬೆಳೆಹಾನಿ ಜೊತೆಗೆ ಮಳೆ ನೀರಿನ ರಭಸಕ್ಕೆ ರೈತರ ಜಮೀನು ಹಳ್ಳವಾಗಿದೆ. ನೀರಿನ ರಭಸಕ್ಕೆ ರೈತರ ಜಮೀನಿನಲ್ಲಿ ದೊಡ್ಡ ಕಂದಕ ಸೃಷ್ಟಿಯಾಗಿದೆ. ಕಂದಕದೊಳೆಗೆ ಕುಸಿದ ವಿದ್ಯುತ್ ಕಂಬಗಳು, ಹಳ್ಳದ ದಿಕ್ಕುಬದಲಾಗಿ ಜಮೀನಿಗೆ ನುಗ್ಗಿರುವ ನೀರು ನೋಡಿ ರೈತರು ಕಂಗಾಲಾಗಿದ್ದಾರೆ.
ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ
ಜಮೀನಿನ ಮೇಲೆ ನದಿಯಂತೆ ಹರಿಯುತ್ತಿರುವ ಮಳೆ ನೀರಿನಿಂದ ತೆಂಗು, ಬಾಳೆ, ಜೋಳ, ರಾಗಿ, ರೇಷ್ಮೆ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಅಪಾರ ಪ್ರಮಾಣದ ಮಳೆ ಹಾನಿ ಸಂಭವಿಸಿದ್ದರೂ ತಿರುಗಿಯೂ ನೋಡದ ಅಧಿಕಾರಿಗಳು, ಜನಪ್ರತಿನಿಧಿಗಳು ಸಂಬಂಧ ಪಟ್ಟ ಅಧಿಕಾರಿಗಳು ಬೆಳೆ ಹಾನಿ ಪರಿಶೀಲನೆ ಮಾಡುವಂತೆ ರೈತರು ನ್ಯೂಸ್ 18 ಮೂಲಕ ಒತ್ತಾಯಿಸಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಬೈಯ್ಯಬೇಕಾಗುತ್ತೆ ಹುಷಾರ್ ಎಂದಿದ್ದಾರೆ.
ಇದನ್ನೂ ಓದಿ: Landslides: ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ; ಕರಿಕೆ ರಸ್ತೆ, ಸಂಪಾಜೆಯ ಕಲ್ಲಾಳದಲ್ಲಿ ಭೂಕುಸಿತ
ಒಟ್ಟಾರೆ ರಕ್ಕಸ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ಸಂಕಷ್ಟದಲ್ಲಿರುವ ರೈತರು, ಮನೆ ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರ ಸೂಕ್ತ ಪ್ರಮಾಣದಲ್ಲಿ ಪರಿಹಾರ ಕೊಡಿಸುವ ಕೆಲಸ ಮಾಡಬೇಕಾಗಿದೆ. ಇದರ ಜೊತೆಗೆ ರೈತರಿಗೆ ನೈತಿಕ ಸ್ಥೈರ್ಯ ತುಂಬಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ