• ಹೋಂ
  • »
  • ನ್ಯೂಸ್
  • »
  • business
  • »
  • Farmers Protest: ರೈತ ಹೋರಾಟಕ್ಕೆ ಆಪ್​ ಬೆಂಬಲ, ಕೇಜ್ರಿವಾಲ್​ ನಿರ್ದೇಶನದಂತೆ ಹೋರಾಟಗಾರರಿಗೆ ಆಹಾರ ನೀರು ಸರಬರಾಜು

Farmers Protest: ರೈತ ಹೋರಾಟಕ್ಕೆ ಆಪ್​ ಬೆಂಬಲ, ಕೇಜ್ರಿವಾಲ್​ ನಿರ್ದೇಶನದಂತೆ ಹೋರಾಟಗಾರರಿಗೆ ಆಹಾರ ನೀರು ಸರಬರಾಜು

ದೆಹಲಿ ಚಲೋ ಚಳುವಳಿಯಲ್ಲಿ ರೈತರು.

ದೆಹಲಿ ಚಲೋ ಚಳುವಳಿಯಲ್ಲಿ ರೈತರು.

ದೆಹಲಿಯಲ್ಲಿ ಎಲ್ಲಾ ಪ್ರವೇಶ ದ್ವಾರಗಳನ್ನು ನಿರ್ಬಂಧಿಸಿ ಪ್ರತಿಭಟನೆ ಮಾಡುವ ಎಚ್ಚರಿಕೆ ಹಿನ್ನೆಲೆ, ಇಂದು ಪ್ರತಿಭಟನೆ ತೀವ್ರಗೊಳ್ಳುವ ಲಕ್ಷಣಗಳಿವೆ. ಈ ನಡುವೆ ಪ್ರತಿಭಟನೆಯನ್ನು ಕೈಬಿಟ್ಟು ಮಾತುಕತೆಗೆ ಆಗಮಿಸುವಂತೆ ಕೇಂದ್ರ ಸರ್ಕಾರ ಹೇಳಿದೆ.

  • Share this:

ನವ ದೆಹಲಿ (ನವೆಂಬರ್​ 30); ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ 'ದೆಹಲಿ ಚಲೋ' ಹೆಸರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದೆ. ದೇಶದ ವಿವಿಧ ಮೂಲೆಗಳಿಂದ ದೆಹಲಿಯತ್ತ ಧಾವಿಸಿದ್ದ ರೈತರು ನವೆಂಬರ್ 26ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗೆ ಮೊದಲು ಒಪ್ಪಿಗೆ ನೀಡಿದ್ದ ಪೊಲೀಸರು ನಂತರ ಪ್ರತಿಭಟನೆ ಹತ್ತಿಕ್ಕಲೆಂದೇ ಕೊರೋನಾ ಕಾರಣವೊಡ್ಡಿ ಒಪ್ಪಿಗೆಯನ್ನು ಹಿಂಪಡೆದಿದ್ದರು. ಇದಲ್ಲದೆ ರೈತರು ದೆಹಲಿಯನ್ನು ಪ್ರವೇಶಿಸದಂತೆ ಗಡಿಯಲ್ಲೇ ತಡೆದರು. ಸದ್ಯ ದೆಹಲಿಯ ಗಡಿಯಲ್ಲಿರುವ ರೈತರು ತಾವಿದ್ದ ಸ್ಥಳಗಳಲ್ಲೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಆದರೆ, ಹೀಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ದೇಶದ ರೈತರಿಗೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರ್ದೇಶನದಂತೆ ರೈತರಿಗೆ ಆಹಾರ, ನೀರು, ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


"ದೆಹಲಿಯಲ್ಲಿ ರೈತರು ಎಲ್ಲೆಲ್ಲಿ ಪ್ರತಿಭಟನೆ ಮಾಡಲು ಬಯಸುತ್ತಾರೋ ಅವರಿಗೆ ಅನುಮತಿ ನೀಡಬೇಕು. ದೆಹಲಿ ಸಿಎಂ ನಿರ್ದೇಶನದಂತೆ, ಎಎಪಿ ಸರ್ಕಾರ ಪ್ರತಿಭಟನಾಕಾರ ರೈತರಿಗೆ ಬೆಂಬಲ ನೀಡಲಿದೆ. ನಾವು ಅವರಿಗೆ ಶೆಡ್‌ಗಳು, ನೀರು, ವಿದ್ಯುತ್ ಇತ್ಯಾದಿಗಳನ್ನು ವ್ಯವಸ್ಥೆ ಮಾಡುತ್ತೇವೆ. ನಾವು ರೈತರ ಪರವಾಗಿ ನಿಲ್ಲುತ್ತೇವೆ" ಎಂದು ಹೇಳುವ ಮೂಲಕ ಎಎಪಿ ಪಕ್ಷದ ರಾಷ್ಟ್ರೀಯ ವಕ್ತಾರ ರಾಘವ್ ಚಾಡ್ಡಾ ರೈತ ಹೋರಾಟದ ಕುರಿತು ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ



ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ 32 ರೈತ ಸಂಘಟನೆಗಳು ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟನೆಯು ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ರಾಜಧಾನಿಯ ಎಲ್ಲಾ ಪ್ರವೇಶ ದ್ವಾರಗಳನ್ನು ನಿರ್ಬಂಧಿಸಿ, ಬಂದ್ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.


ದೆಹಲಿಯಲ್ಲಿ ಎಲ್ಲಾ ಪ್ರವೇಶ ದ್ವಾರಗಳನ್ನು ನಿರ್ಬಂಧಿಸಿ ಪ್ರತಿಭಟನೆ ಮಾಡುವ ಎಚ್ಚರಿಕೆ ಹಿನ್ನೆಲೆ, ಇಂದು ಪ್ರತಿಭಟನೆ ತೀವ್ರಗೊಳ್ಳುವ ಲಕ್ಷಣಗಳಿವೆ. ಈ ನಡುವೆ ಪ್ರತಿಭಟನೆಯನ್ನು ಕೈಬಿಟ್ಟು ಮಾತುಕತೆಗೆ ಆಗಮಿಸುವಂತೆ ಕೇಂದ್ರ ಸರ್ಕಾರ ಹೇಳಿದೆ. ಆದರೆ ನವೆಂಬರ್ 13ರಂದು ರೈತರೊಂದಿಗೆ ಮೊದಲ ಸುತ್ತಿನ ಮಾತುಕತೆ ವೇಳೆ ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಸ್ವಲ್ಪವೂ ಸ್ಪಂದಿಸದೇ ಇರುವುದರಿಂದ ಪ್ರತಿಭಟನಾನಿರತ ರೈತರು ಕೇಂದ್ರ ಸರ್ಕಾರದ 'ಮಾತುಕತೆ ಪ್ರಸ್ತಾಪವನ್ನು' ನಿರಾಕರಿಸಿದ್ದಾರೆ.


ಇದನ್ನೂ ಓದಿ : Farmers Protest: 5ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ; ದೆಹಲಿ ಗಡಿ ಬಂದ್


ಕೃಷಿಯನ್ನು ಕಾರ್ಪೊರೇಟ್ ಕುಳಗಳ ವಶವನ್ನಾಗಿ ಮಾಡುವ ಈ ರೈತ ವಿರೋಧಿ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆದುಕೊಳ್ಳುವವರೆಗೂ ಹೋರಾಟ ನಡೆಸುತ್ತೇವೆ. ನಮ್ಮ ಬಳಿ 3-4 ತಿಂಗಳಿಗಾಗುವಷ್ಟು ರೇಷನ್ ಇದೆ. ಹಾಗಾಗಿ ಪ್ರತಿಭಟನೆ ಅನಿರ್ದಿಷ್ಠಾವಧಿ ನಡೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್‌ನ ಅಧ್ಯಕ್ಷ ಸುರ್ಜಿತ್ ಪೌಲ್ ತಿಳಿಸಿದ್ದಾರೆ.


ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಭಟನೆ ರಾಜಕೀಯ ಎಂದು ನಾನು ಎಂದಿಗೂ ಆರೋಪಿಸಿಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆಯ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಕೃಷಿ ಸುಧಾರಣೆಗಳು ರೈತರನ್ನು ವಿವಿಧ ಸಂಕೋಲೆಗಳಿಂದ ಮುಕ್ತಗೊಳಿಸುತ್ತವೆ ಮತ್ತು ಅವರಿಗೆ ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡುತ್ತವೆ ಎಂದು ಮತ್ತೆ ಪುನರುಚ್ಚರಿಸಿದ್ದಾರೆ.

top videos
    First published: