ನಮ್ಮಲ್ಲಿ ಮಕ್ಕಳು (Children's) ಸಾಮಾನ್ಯವಾಗಿ ಪೋಷಕರ (Parents) ಹಾದಿಯಲ್ಲೇ ಸಾಗುತ್ತಾರೆ. ಹಾಗಾಗಿಯೇ ಅನೇಕ ಶಿಕ್ಷಕರ ಮಕ್ಕಳು ಶಿಕ್ಷಕರಾಗುತ್ತಾರೆ. ಡಾಕ್ಟರ್ ಮಕ್ಕಳು ಡಾಕ್ಟರ್, ವಕೀಲರ ಮಕ್ಕಳು ಕಾನೂನನ್ನೇ ಅಭ್ಯಾಸ ಮಾಡುತ್ತಾರೆ. ಇದಕ್ಕೆ ಕಾರಣ ಮಕ್ಕಳ ಮೇಲೆ ಮನೆಯವರ ಪ್ರಭಾವ (Impact) . ಆದ್ರೆ ಕೆಲವರು ಮಾತ್ರ ತಮ್ಮ ಆಸಕ್ತಿ, ಕನಸುಗಳ ಹಾದಿಯನ್ನೇ ಆಯ್ಕೆ ಮಾಡಿಕೊಂಡು ಸಾಧನೆ ಮಾಡುತ್ತಾರೆ. ಅಂಥವರಲ್ಲಿ ಸೂರತ್ ನಿವಾಸಿ ರಾಶಿ ( Rashi) ಕೂಡ ಒಬ್ಬರು.
ಸುಸ್ಥಿರ ವ್ಯವಹಾರವನ್ನು ಪ್ರಾರಂಭಿಸುವ ಉತ್ಸಾಹ ಹೊಂದಿದ್ದ ರಾಶಿ ಅಗರ್ವಾಲ್ ಹತ್ತಿ ತ್ಯಾಜ್ಯದಿಂದ ದಿನಚರಿ ನೋಟ್ಬುಕ್ ತಯಾರಿಕೆ ಆರಂಭಿಸಿದ್ದಾರೆ. ಅಲ್ಲದೇ ಸದ್ಯ 150 ಕ್ಕೂ ಹೆಚ್ಚು ಗ್ರಾಮೀಣ ಕುಶಲಕರ್ಮಿಗಳಿಗೆ ಕೆಲಸ ನೀಡಿದ್ದಾರೆ.
ಐಐಟಿ ಸೇರುವ ಹಂಬಲದಿಂದ ಉದ್ಯಮದ ಕಡೆಗೆ
22 ವರ್ಷ ವಯಸ್ಸಿನ ರಾಶಿ ಅಗರ್ವಾಲ್ ಅವರಿಗೆ ತಮ್ಮ ಅವಳಿ ಸಹೋದರರಂತೆಯೇ ಐಐಟಿ ಸೇರುವ ಅಪಾರ ಹಂಬಲವಿತ್ತು. ಆದರೆ ಅದು ಸಾಧ್ಯವಾಗದೇ ಹೋದಾಗ ಅವರು ನಿರಾಶರಾಗಲಿಲ್ಲ. ಬದಲಾಗಿ ತನ್ನ ಇಷ್ಟದ ಉದ್ಯಮ ನಡೆಸಲು ಮುಂದಾದರು. ಆರ್ಕಿಟೆಕ್ಚರ್ ಕಲಿತಿದ್ದ ಅವರು ಸುಮಾರು 7 ತಿಂಗಳುಗಳ ಕಾಲ ಪರಿಶ್ರಮ ಪಟ್ಟರು. ಜನರು ಅದನ್ನ ಹವ್ಯಾಸ ಎಂದು ಕರೆದರು.
ಆದರೆ ಮುಂದೆ ರಾಶಿ ಅಂದುಕೊಂಡಿದ್ದನ್ನು ಮಾಡಿ ತೋರಿಸಿದರು. ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದ ರಾಶಿ ಕೊನೆಗೂ ಸುಸ್ಥಿರ ಪ್ಲಾನರ್ (Note book) ಅನ್ನು ಲಾಂಚ್ ಮಾಡಿದರು. ಸ್ಥಳೀಯ ಕುಶಲಕರ್ಮಿಗಳಿಂದ ಹತ್ತಿಯ ತ್ಯಾಜ್ಯ ಬಳಸಿ ಮತ್ತು ಕೈಯ್ಯಲ್ಲಿ ಹೊಲಿದು ತಯಾರಿಸಲಾದ ಪ್ಲಾನರ್ ಉದ್ಯಮ ಆರಂಭಿಸಿದರು. ಸುಮಾರು 150 ಸ್ಥಳೀಯ ಕುಶಲಕರ್ಮಿಗಳಿಗೆ ಕೆಲಸ ಕೊಟ್ಟಿರುವ ರಾಶಿ ತಮ್ಮ ಕೆಲಸದ ಬಗ್ಗೆ ಹೆಮ್ಮೆ ಪಡುತ್ತಾರೆ.
ರುಹಾನಿ ರಂಗ್ ಸ್ಟೇಷನರಿ ಉದ್ಯಮ!
ಇಂದು ರಾಶಿಯವರು 'ರೂಹಾನಿ ರಂಗ್' ಎಂಬ ಹೆಸರಿನ ಸ್ಟೇಷನರಿ ಬ್ಯುಸಿನೆಸ್ ಹೊಂದಿದ್ದಾರೆ. ಅವರ ಉತ್ಪನ್ನಗಳು ಇನ್ಸ್ಟಾಗ್ರಾಂನಲ್ಲಿ ಯಶಸ್ವಿಯಾಗಿವೆ. ಸೋಷಿಯಲ್ ಮೀಡಿಯಾದಲ್ಲಿ ಅವರು 39,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
"ಜನರು ಇದನ್ನು ಏನೇ ಕರೆದರೂ ಇದು ನನ್ನ ಉತ್ಸಾಹ ಎಂದು ನನಗೆ ತಿಳಿದಿತ್ತು. ನಾನು ಅಂತಿಮವಾಗಿ ನನ್ನ ಸುಸ್ಥಿರ ಪ್ಲಾನರ್ಗಳನ್ನು ಹತ್ತಿ ತ್ಯಾಜ್ಯದಿಂದ ತಯಾರಿಸಿದಾಗ ಮತ್ತು ಗ್ರಾಮೀಣ ಕುಶಲಕರ್ಮಿಗಳಿಂದ ಉದ್ಯಮ ಆರಂಭಿಸಿದಾಗ ಅದೇ ಜನರು ನನ್ನನ್ನು ಶ್ಲಾಘಿಸಿದರು” ಎಂಬುದಾಗಿ ರಾಶಿ ಹೇಳುತ್ತಾರೆ.
View this post on Instagram
ತಮ್ಮ ವ್ಯಾಪಾರದೊಂದಿಗೆ, ಅವರು ಜಗತ್ತನ್ನು ಹೆಚ್ಚು ಪರಿಸರ ಸ್ನೇಹಿಯನ್ನಾಗಿ ಮಾಡುವ ಉದ್ದೇಶ ಹೊಂದಿದ್ದಾರೆ. ಅಲ್ಲದೇ ಗ್ರಾಮೀಣ ಕುಶಲಕರ್ಮಿಗಳಿಗೆ ಕೆಲಸ ನೀಡಿ ಅವರೂ ಬೆಳೆಯುವಂತೆ ಮಾಡುತ್ತಿದ್ದಾರೆ. ಉತ್ಪನ್ನಗಳನ್ನು ತಯಾರಿಸಲು ಅವರು ಪ್ರಸ್ತುತ ನೂರಕ್ಕೂ ಹೆಚ್ಚು ಕುಶಲಕರ್ಮಿಗಳನ್ನು ನೇಮಿಸಿಕೊಂಡಿದ್ದಾರೆ.
ಬರೀ ಪ್ಲಾನರ್ ಮಾತ್ರವಲ್ಲದೇ ರಾಶಿಯವರು ಬೇರೆ ಬೇರೆ ಉತ್ಪನ್ನಗಳನ್ನೂ ತಯಾರಿಸುತ್ತಾರೆ. ಅದರಲ್ಲಿ ಮುಖ್ಯವಾಗಿ ಡೈರಿಗಳು, ಕ್ಯಾಲೆಂಡರ್ಗಳು, ಪ್ರಯಾಣದ ಜರ್ನಲ್ಗಳು, ಮಗ್ಗಳು ಮತ್ತು ನೋಟ್ಬುಕ್ಗಳನ್ನು ಸಹ ಮಾರಾಟ ಮಾಡುತ್ತಾರೆ.
ಅಂದಹಾಗೆ ಇವೆಲ್ಲವೂ ಕುಶಲಕರ್ಮಿಗಳ ಕರಕುಶಲತೆಯಿಂದ ಮಾಡಲ್ಪಟ್ಟಿವೆ. ಮಧುಬನಿ ಮತ್ತು ವಾರ್ಲಿಯಂತಹ ಸಾಂಪ್ರದಾಯಿಕ ಕಲಾ ಪ್ರಕಾರಗಳಿಗೆ ಆಧುನಿಕ ಟ್ವಿಸ್ಟ್ ನೀಡುವ ಮೂಲಕ ಅವರು ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಾರೆ.
ಒಟ್ಟಾರೆ, ಐಐಟಿ ಸೇರುವ ಹಂಬಲ ಹೊಂದಿದ್ದ ರಾಶಿ ಇಂದು ಯಶಸ್ವಿಯಾಗಿ ಬ್ಯುಸಿನೆಸ್ ಮಾಡುತ್ತಿದ್ದಾರೆ. ತಮ್ಮ ಇಷ್ಟದ ಕೆಲಸ ಮಾಡುವ ಮೂಲಕ ಬೇರೆಯವರ ಬಾಳಿಗೂ ಬೆಳಕಾಗಿದ್ದಾರೆ.
ಆತ್ಮವಿಶ್ವಾಸ, ಸಾಧಿಸುತ್ತೇನೆ ಎಂಬ ನಂಬಿಕೆ ಹಾಗೂ ಪರಿಶ್ರಮದ ಮೂಲಕ ಇಂದು ಯಶಸ್ವಿ ಉದ್ಯಮ ನಡೆಸುತ್ತಿದ್ದಾರೆ. ಹೀಗೆಯೆ ತಮ್ಮಿಷ್ಟದ ಉದ್ಯಮ ನಡೆಸಬೇಕು ಎಂಬ ಕನಸು ಹೊತ್ತಿರುವ ಎಷ್ಟೋ ಜನರಿಗೆ ರಾಶಿ ಅಗರ್ವಾಲ್ ಸ್ಪೂರ್ತಿಯಾಗುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ