ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಚರ್ಚೆಗಳು ಮುಂದುವರೆದಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋಲಿನ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ಇದಕ್ಕೆ ಕಾರಣ ಕೊಹ್ಲಿ ಸಾರಥ್ಯದಲ್ಲಿ ಟೀಮ್ ಇಂಡಿಯಾ ಇದುವರೆಗೆ ಐಸಿಸಿ ಟ್ರೋಫಿ ಗೆಲ್ಲದಿರುವುದು. 2017 ರಲ್ಲಿ ಚಾಂಪಿಯನ್ಟ್ರೋಫಿ ಫೈನಲ್ನಲ್ಲಿ ಭಾರತ ಮುಗ್ಗರಿಸಿದರೆ, 2019 ವಿಶ್ವಕಪ್ನಲ್ಲಿ ಸೆಮಿ ಫೈನಲ್ನಲ್ಲಿ ಎಡವಿತ್ತು. ಇದೀಗ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಟ್ರೋಫಿ ಕೂಡ ಕೈ ತಪ್ಪಿದೆ. ಹೀಗಾಗಿ ಕೊಹ್ಲಿ ನಾಯಕತ್ವ ಮತ್ತೊಮ್ಮೆ ಚರ್ಚಾ ವಿಷಯವಾಗಿದೆ.
ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ, ವಿರಾಟ್ ಕೊಹ್ಲಿ ವಿಶ್ವದ ನಂಬರ್ 1 ಬ್ಯಾಟ್ಸ್ಮನ್ ಎಂಬುದರಲ್ಲಿ ಯಾವುದೇ ಡೌಟ್ ಇಲ್ಲ. ಹಾಗೆಯೇ ನಂಬರ್ 1 ಕ್ಯಾಪ್ಟನ್ ಕೂಡ. ಇದಕ್ಕೆ ದಾಖಲೆಗಳೇ ಸಾಕ್ಷಿ. ಇದೀಗ ಎಲ್ಲರೂ ವಿರಾಟ್ ಕೊಹ್ಲಿ ಐಸಿಸಿ ಟ್ರೋಫಿ ಗೆಲ್ಲದಿರುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರು ಐಪಿಎಲ್ ಟ್ರೋಫಿ ಕೂಡ ಗೆದ್ದಿಲ್ಲ. ಹೀಗಾಗಿ ಅವರಿಗೆ ಒಂದಿಷ್ಟು ಸಮಯವಕಾಶ ನೀಡಬೇಕಾಗಿದೆ ಎಂದಿದ್ದಾರೆ.
ಏಕೆಂದರೆ ಮುಂದಿನ ದಿನಗಳಲ್ಲಿ 2-3 ವಿಶ್ವಕಪ್ ಬರಲಿದೆ. ಅದರಲ್ಲೂ ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ನಡೆಯಲಿದೆ. ಒಂದು ತಂಡವು ಪ್ರತಿಷ್ಠಿತ ಟೂರ್ನಿಯಲ್ಲಿ ಫೈನಲ್ ತಲುಪುವುದು ಅಂದುಕೊಂಡಷ್ಟು ಸುಲಭವಲ್ಲ. ಕೆಲವೊಮ್ಮೆ ಅಂತಿಮಘಟ್ಟದಲ್ಲಿ ತಪ್ಪುಗಳಾಗುತ್ತವೆ ಎಂದು ಸುರೇಶ್ ರೈನಾ ತಿಳಿಸಿದ್ದಾರೆ. ಈ ಮೂಲಕ ಮುಂದಿನ ವಿಶ್ವಕಪ್ವರೆಗೂ ನಾಯಕನಾಗಿ ವಿರಾಟ್ ಕೊಹ್ಲಿಗೆ ಅವಕಾಶ ನೀಡುವುದು ಉತ್ತಮ ಎಂದು ಪರೋಕ್ಷವಾಗಿ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ