ಚಿತ್ರದುರ್ಗ: ಬಿಜೆಪಿ, RSS ಕಾರ್ಯಕರ್ತರನ್ನ ಮುಂಚೆ ಮುಟ್ಟಿದಾಗ ಶಕ್ತಿ ಇರಲಿಲ್ಲ ನಮಗೆ, ಬಾಯಿ ಮುಚ್ಕಂಡ್ ಇದ್ವಿ, ಈಗ ಮುಟ್ಟಲಿ ತಾಕತ್ತಿದ್ದರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ. ಅಲ್ಲದೇ, ಇಡೀ ದೇಶದಲ್ಲಿ ಬೆಳೆದಿದ್ದೇವೆ, ನಾವಾಗಿ ನಾವು ಯಾರನ್ನೂ ಕೊಲೆ ಮಾಡಲು ಹೋಗಲ್ಲ, ನಮ್ಮ ಸುದ್ದಿಗೆ ಬಂದ್ರೆ, ಭ್ರಹ್ಮ ಬಂದ್ರೂ ಬಿಡಲ್ಲ ಎಂದು ಚಿತ್ರದುರ್ಗದಲ್ಲಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಚಿತ್ರದುರ್ಗದ ಮಾದಾರ ಚನ್ನಯ್ಯ ಮಠಕ್ಕೆ ಬೇಟಿ ನೀಡಿ ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯಗೆ ಸಿಎಂ ಸ್ಥಾನ ಕಳೆದುಕೊಂಡಾಗಿಂದ ದಿನವೂ ಒಂದೊಂದು ಕೆಟ್ಟ ಕನಸು ಬೀಳುತ್ತಲೇ ಇರುತ್ತದೆ. ಈ ಸರ್ಕಾರ ಹೋಗುತ್ತೆ, ನಾನು ಮತ್ತೆ ಮುಖ್ಯಮಂತ್ರಿ ಆಗ್ತೆನೆ ಎಂಬ ಕೆಟ್ಟ ಕನಸು ಸಿದ್ದರಾಮಯ್ಯ ಅವರಿಗೆ ಬೀಳುತ್ತಿದೆ. ದೇಶ, ರಾಜ್ಯದಲ್ಲಿ ಕೆಟ್ಟ ಕನಸುಗಾರ ಯಾರಾದ್ರು ಇದ್ದರೆ ಅದು ಸಿದ್ದರಾಮಯ್ಯ. ನಮ್ಮ ಸರ್ಕಾರದಲ್ಲಿ ಅಸಮಧಾನ ಯಾಕೆ ಸ್ಪೋಟ ಆಗುತ್ತದೆ, ರಾಜ್ಯದಲ್ಲಿ ನಿಮ್ಮ ಸರ್ಕಾರ ಐದು ವರ್ಷ ಇತ್ತಲ್ಲ, ಯಾಕೆ ನೀವು ಸರ್ಕಾರ ಕಳೆದುಕೊಂಡ್ರಿ ಎಂದು ಪ್ರಶ್ನಿಸಿದ್ದಾರೆ. ಎಲ್ಲರೂ ಸಮಾನರಾಗಿ, ಒಟ್ಟಾಗಿ, ಜನಪರ ಕಾಳಜಿಯಿಂದ ಕೆಲಸ ಮಾಡಿದ್ದರೆ, ನೀವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತಿರಲಿಲ್ಲ, ನಿಮ್ಮ ಸರ್ಕಾರ ಹೋಗುತ್ತಿತ್ತೇನು, ಎಂದು ತಿರುಗೇಟು ನೀಡಿದ್ದಾರೆ.
ಇನ್ನೂ ನೀವು ಜನರಿಗೆ ಹಿಂದುಳಿದ ದಲಿತರ ಉದ್ದಾರಕರು ಎಂದು ಹೇಳಿಕೊಂಡು ಬಂದು, ಜನರಿಗೆ ಮಾಡಿದ ಮೋಸದಿಂದಲೇ ಕಾಂಗ್ರೇಸ್ ಸರ್ಕಾರ ಹೋಯ್ತು. ದಲಿತರಾಗಿದ್ದ ಜಿ. ಪರಮೇಶ್ವರ್ ಅವರನ್ನ, ನಿಂತು ಸೋಲಿಸಿದ್ರಿ, ಈಗ ಬಿಜೆಪಿಯಲ್ಲಿ ದಲಿತ ಮುಖ್ಯಮಂತ್ರಿಮಾಡಿ ಎಂದು ಹೇಳುತ್ತಿದ್ದೀರಿ. ನಿಮ್ಮ ಸರ್ಕಾರ ಕಳಕೊಂಡು, ನೀವು ಸೋತಿದ್ದು ಲೆಕ್ಕಕ್ಕಿಲ್ಲ. ಈಗ ಮತ್ತೆ ದಲಿತರ ಬಗ್ಗೆ ಮಾತನಾಡುತ್ತೀರಿ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಸಿದ್ದರಾಮಯ್ಯ ಹೊರಗಡೆಯಿಂದ ಬಂದವರು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅದನ್ನ ಸಿದ್ದರಾಮಯ್ಯ ಒಪ್ಪಿಕೊಂಡು, ನಾನು ಹೊರಗಡೆಯಿಂದ ಬಂದದ್ದು ಹೌದು, ಕಾಂಗ್ರೆಸ್ ಪಕ್ಷದ ಸೊಸೆಯಾಗಿ ಬಂದಿದ್ದೇನೆ ಎಂದು ಹೇಳಿದ್ದರು. ಸಿದ್ದರಾಮಯ್ಯ ಬಾದಾಮಿಯಲ್ಲಿ ಮಗ ಎಂದು ಗೆದ್ದರು, ಚಾಮುಂಡೇಶ್ವರಿ ಯಲ್ಲಿ ಮಗ ಎಂದರು, ಇವರು ಯಾರಿಗೆ ಮಗ, ಯಾರಿಗೆ ಸೊಸೆ, ಯಾರಿಗೆ ಅಪ್ಪ, ಅಮ್ಮ ಎಂದು ವ್ಯಂಗ್ಯ ಮಾಡಿದರು. ನಾವು ಬಿಜೆಪಿಯವರು ಭಾರತ ಮಾತೆ ನಮ್ಮ ತಾಯಿ ಎಂದು ಹೇಳುತ್ತೇವೆ, ನಿಮಗೆ ಕಾಂಗ್ರೆಸ್, ಜೆಡಿಎಸ್ ತಾಯಿಯಾ, ಎಂದು ಕಾಲೆಳೆದರು. ಇನ್ನೂ ರಾಜ್ಯದಲ್ಲಿ ಹೊಸ ಸರ್ಕಾರ ಆಗಲು ಕಾರಣ, ಕಾಂಗ್ರೆಸ್ - ಜೆಡಿಎಸ್ನಿಂದ ಅನೇಕರು ರಾಜಿನಾಮೆ ನೀಡಿ ಬಂದದ್ದು, ಅವರು ಬರದೇ ಇದ್ದಿದ್ದರೆ ನಮ್ಮ ಸರ್ಕಾರ ಆಗುತ್ತಿರಲಿಲ್ಲ. ಅಷ್ಟೂ ಜನಕ್ಕೂ ಮಂತ್ರಿ ಮಾಡಬೇಕಿತ್ತು. ಸಚಿವ ಸ್ಥಾನ ಸಿಗದಿದ್ದಕ್ಕೆ, ಬೇಕಾದ ಖಾತೆ ಸಿಗದೆ ಇದ್ದಾಗ ಸ್ವಾಭಾವಿಕವಾಗಿ, ಬೇಸರ ಇರುತ್ತದೆ. ಇಲ್ಲವೆಂದು ನಾನು ಹೇಳೋದಿಲ್ಲ. ಅವರೆಲ್ಲರನ್ನೂ ಸಮಾಧಾನದಿಂದ ತಗೊಂಡು ಹೋಗುವ ವ್ಯವಸ್ಥೆ ಬಿಜೆಪಿಯಲ್ಲಿ ಆಗುತ್ತದೆ.
ಅಲ್ಲದೇ ನಿಮ್ಮ ಸರ್ಕಾರ ಬಿದ್ದು ಹೋಗುತ್ತದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ನಾನು ಸ್ಪಷ್ಟವಾಗಿ ಅವರಿಗೆ ಹೇಳುತ್ತೇನೆ. ನಿಮ್ಮ ಕೆಟ್ಟ ಕನಸಿಗೆ ಯಾವತ್ತೂ ಬೆಲೆ ಇಲ್ಲ, ಕರ್ನಾಟಕದಲ್ಲಿ ಇನ್ನೆಂದೆಂದೂ ಕಾಂಗ್ರೆಸ್ ಸರ್ಕಾರ ಬರಲ್ಲ. ನೀವಂತೂ ಮುಖ್ಯಮಂತ್ರಿ ಆಗೋ ಕನಸು ಬಿಟ್ಟುಬಿಡಿ. ಇನ್ನು ಮುಂಬರುವ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರ ಸಂಘಟನೆ ಕಟ್ಟಿ, ಅವರನ್ನೇ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ. ವಿಧಾನ ಸೌಧದ ಮೇಲೆ ಭಾರತಿಯ ಜನತಾ ಪಾರ್ಟಿ ಧ್ವಜ ಹಾರಿಸುತ್ತೇವೆ ಎಂದು ಹೇಳಿದ್ದಾರೆ.
ಈ ಹಿಂದೆ ಒಂದು ಕಾಲದಲ್ಲಿ RSS, ಬಿಜೆಪಿ ಅಂದ್ರೆ ಕೊಲೆ ಮಾಡ್ತಿದ್ದರು, ಆಗ ನಮಗೆ ಶಕ್ತಿ ಇರಲಿಲ್ಲ. ಆಗ ಪ್ರಶಾಂತವಾಗಿರಿ ಎಂದು ನಮ್ಮ ರಾಷ್ಟ್ರೀಯ ನಾಯಕರು ಹೇಳುತ್ತಿದ್ದರು. ಈಗ ಯಾವಾನಾದರೂ, ನಮ್ಮ ಮೈ ಮುಟ್ಟಲಿ ನೋಡೋಣ, ಎಂದಿದ್ದಾರೆ. ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರನ್ನ ಮುಂಚೆ ಮುಟ್ಟಿದಾಗ ನಮಗೆ ಶಕ್ತಿ ಇರಲಿಲ್ಲ, ಬಾಯಿ ಮುಚ್ಚಿಕೊಂಡು ಇರುವ ಪರಿಸ್ಥಿತಿ ಇತ್ತು. ಈಗ ಮುಟ್ಟಲಿ ತಾಕತ್ತಿದ್ದರೆ ಎಂದು ಸವಾಲು ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ