ಕೋಲಾರ: 2023ರ ವಿಧಾನಸಭೆ ಚುನಾವಣೆಯಲ್ಲಿ (Assembly election 2023) ಕೋಲಾರ (Kolar) ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯರ (Siddaramaiah) ನೇತೃತ್ವದಲ್ಲಿ ನಡೆಯುತ್ತಿರುವ ಪ್ರಜಾಧ್ವನಿ (Praja Dhwani) ಯಾತ್ರೆ ಸೋಮವಾರ ಜಿಲ್ಲೆಗೆ ಆಗಮಿಸಲಿದೆ. ಇನ್ನು ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವುದರಿಂದ ನಾಳಿನ ಸಮಾವೇಶ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಕೋಲಾರ ನಗರ ಹೊರವಲಯದ ಟಮಕ ಬಳಿ ಸಮಾವೇಶ ನಡೆಯಲಿದೆ. ಕೋಲಾರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆಂದು ಸಿದ್ದರಾಮಯ್ಯ ಘೋಷಣೆ ಬಳಿಕ ನಡೆಯುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ.
60 ಸಾವಿರಕ್ಕೂ ಅಧಿಕ ಜನ ಸೇರಿಸಲು ಸಿದ್ಧತೆ
ಕೋಲಾರದ ಪ್ರಜಾಧ್ವನಿ ಸಮಾವೇಶಕ್ಕೆ 60 ಸಾವಿರಕ್ಕೂ ಅಧಿಕ ಜನರನ್ನ ಸೇರಿಸಲು ಸಿದ್ದತೆ ನಡೆಯುತ್ತಿದೆ. ಜಿಲ್ಲೆಯ 6 ತಾಲೂಕುಗಳಿಂದ ತಲಾ 10 ಸಾವಿರ ಜನರನ್ನ ಬಸ್ಗಳಿಂದ ಕರೆತರಲು ಸಿದ್ದತೆ ನಡೆಯುತ್ತಿದೆ. ಜಿಲ್ಲೆಯ ಐದು ತಾಲೂಕುಗಳಲ್ಲಿ ಕಾಂಗ್ರೆಸ್ ಶಾಸಕರಿರುವುದರಿಂದ ಕಾರ್ಯಕ್ರಮವನ್ನು ಐತಿಹಾಸಿಕ ಸಮಾವೇಶವನ್ನಾಗಿ ಮಾಡುವ ಉದ್ದೇಶವಿದೆ.
ಕೋಲಾರ ಕ್ಷೇತ್ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಆಕರ್ಷಣೆಯಾಗಿರುವುದರಿಂದ ಈ ಸಮಾವೇಶ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಸುಮಾರು 12 ಎಕರೆ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ಹಾಕಲಾಗುತ್ತಿದೆ. 55 ಸಾವಿರ ಚೇರ್, ಗಣ್ಯರ ವೇದಿಕೆಗೆ ಜರ್ಮನ್ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದ ಎದುರು ಸಿದ್ದರಾಮಯ್ಯ ಅವರ 100 ಅಡಿ ಎತ್ತರದ ಕಟೌಟ್ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: Siddaramaiah: ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಮಾಸ್ಟರ್ ಪ್ಲಾನ್, ಸಿದ್ದು ಸೋಲಿಸಲು 'ದಲಿತಾಸ್ತ್ರ' ಪ್ರಯೋಗ!
ಮುಂದುವರೆದ ಬಣ ರಾಜಕೀಯ
ಕೋಲಾರದಲ್ಲಿ ನಾಳೆ ಕಾಂಗ್ರೆಸ್ ಪಕ್ಷದ ಪ್ರಜಾ ಧ್ವನಿ ಬಸ್ ಯಾತ್ರೆ ನಡೆಯಲಿದೆ. ಈಗಾಗಲೆ ಸಮಾವೇಶದ ಸಿದ್ದತೆ ಬರದಿಂದ ಸಾಗುತ್ತಿದೆ. ಆದರೆ ಸಮಾವೇಶದ ಕಡೆಗೆ ಕೆ.ಹೆಚ್ ಮುನಿಯಪ್ಪ ಮತ್ತು ತಂಡ ತಲೆಯಾಕಿಲ್ಲ. ಕೋಲಾರದಲ್ಲಿ ಸಮಾವೇಶದ ಸಿದ್ದತಾ ಕಾರ್ಯಗಳನ್ನೆಲ್ಲಾ ರಮೇಶ್ ಕುಮಾರ್ ಮತ್ತು ತಂಡದವರು ನೋಡಿಕೊಳ್ಳುತ್ತಿದ್ದಾರೆ. ಕೆ ಎಚ್ ಮುನಿಯಪ್ಪ ಹಾಗೂ ತಂಡ ಕೇವಲ ಬ್ಯಾನರ್ಗಷ್ಟೇ ಸೀಮಿತವಾಗಿದ್ದಾರೆ. ಇದು ಮೇಲುನೋಟಕ್ಕೆ ಜಿಲ್ಲಾ ಕಾಂಗ್ರೆಸ್ನಲ್ಲಿ ಬಣರಾಜಕೀಯ ಇರುವುದನ್ನು ತೋರಿಸುತ್ತಿದೆ.
ಸಿದ್ದರಾಮಯ್ಯ ಶಕ್ತಿ ಪ್ರದರ್ಶನ
ಸಿದ್ದರಾಮಯ್ಯ ಭಾಗವಹಿಸುವ ಕಾರ್ಯಕ್ರಮದಲ್ಲಿ ಜನರೇ ಇರುವುದಿಲ್ಲ ಎಂದು ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ವ್ಯಂಗ್ಯವಾಡುತ್ತಿರುತ್ತವೆ. ಹಾಗಾಗಿ ಜಿಲ್ಲೆಯಲ್ಲಿ 6 ತಾಲೂಕುಗಳಿಂದಲೂ ಜನರನ್ನು ಕರೆತಂದು ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಯಶಸ್ಸುಗೊಳಿಸಿ ಸಿದ್ದರಾಮಯ್ಯರ ಬಲವನ್ನು ತೋರಿಸುವುದು ಜಿಲ್ಲಾ ಕಾಂಗ್ರೆಸ್ ಯೋಜನೆಯಾಗಿದೆ.
ಸಿದ್ದರಾಮಯ್ಯಗೆ ಕುರುಬರಿಂದ ವಿರೋಧ
ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವುದನ್ನು ಖಚಿತಪಡಿಸುತ್ತಿದ್ದಂತೆ ಅವರನ್ನು ಸೋಲಿಸಲು ಯೋಜನೆಗಳು ಸಿದ್ಧವಾಗುತ್ತಿವೆ. ಮೊನ್ನೆಯಷ್ಟೇ ಕುರುಬ ಸಮೂದಾಯದ ಕೆಲವು ನಾಯಕರು ಸಿದ್ದರಾಮಯ್ಯರಿಗೆ ಬೆಂಬಲ ನೀಡುವುದಿಲ್ಲ, ಜಿಲ್ಲೆಯಲ್ಲಿ ಸಮುದಾಯಕ್ಕೆ ಈಗಾಗಲೇ ವರ್ತೂರ್ ಪ್ರಕಾಶ್ ಉತ್ತಮ ಸೌಲಭ್ಯಗಳನ್ನು ದೊರಕಿಸಿಕೊಡುತ್ತಿದ್ದಾರೆ. ಒಂದೇ ಜಿಲ್ಲೆಗೆ ಇಬ್ಬರು ಕುರುಬ ನಾಯಕರ ಅಗತ್ಯವಿಲ್ಲ ಎಂದು ಕುರುಬ ಸಂಘದ ಜಿಲ್ಲಾಧ್ಯಕ್ಷ ಮುನಿಯಪ್ಪ ಬಿಜೆಪಿ ಅಭ್ಯರ್ಥಿ ಎನ್ನಲಾಗುತ್ತಿರುವ ವರ್ತೂರ್ ಪ್ರಕಾಶ್ ಗೆಲ್ಲಿಸಲು ಕರೆ ನೀಡಿದ್ದಾರೆ. ಆದರೆ ಮತ್ತೊಂದು ಗುಂಪು ಸಿದ್ದರಾಮಯ್ಯ ದೊಡ್ಡ ನಾಯಕ ಅವರಿಗೆ ನಮ್ಮ ಬೆಂಬಲ ಎನ್ನುತ್ತಿದೆ.
ಸಿದ್ದರಾಮಯ್ಯ ವಿರುದ್ಧ ದಲಿತ ವಿರೋಧಿ ಅಭಿಯಾನ
ಕುರುಬ ಸಮೂದಾಯದ ವಿರೋಧ ಒಂದು ಕಡೆಯಾದರೆ, ಮತ್ತೊಂದು ಕಡೆ ಕೆಲವು ದಲಿತ ಸಂಘಟನೆಗಳು ಸಿದ್ಧರಾಮಯ್ಯ ವಿರುದ್ಧ ಅಭಿಯಾನ ಆರಂಭಿಸಿವೆ. ಸಿದ್ದರಾಮಯ್ಯ ದಲಿತ ವಿರೋಧಿ, ರಾಜ್ಯದಲ್ಲಿ ದಲಿತ ಸಿಎಂ ಆಗುವುದನ್ನು ತಡೆದಿದ್ದಾರೆ. ಅವರನ್ನು ಸೋಲಿಸಿದರೆ ರಾಜ್ಯದಲ್ಲಿ ದಲಿತರಿಂದ ಸಿಎಂ ಪಟ್ಟ ಸಿಗುತ್ತದೆ ಎಂದು ಸುದ್ದಿಗೋಷ್ಠಿ ನಡೆಸಿ ಕರಪತ್ರಗಳನ್ನು ಹಂಚುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ