ಪಾಟ್ನಾ: ಜನಪ್ರತಿನಿಧಿಗಳ ಸಾರ್ವಜನಿಕ ಜೀವನದಲ್ಲಿ ಶಿಷ್ಠಾಚಾರ ಪಾಲಿಸುವುದು ಮುಖ್ಯ. ಆದರೆ ಎಷ್ಟೋ ಬಾರಿ ಶಾಸಕರು, ಸಚಿವರ ವರ್ತನೆ ಎಲ್ಲೆ ಮೀರಿ ಬಿಡುತ್ತೆ. ತಮ್ಮ ಮಾತು, ವರ್ತನೆಯಿಂದ ವಿವಾದಕ್ಕೆ ಗುರಿಯಾಗುತ್ತಾರೆ. ಇಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಬಿಹಾರದ ಜೆಡಿಯು ಶಾಸಕ ಗೋಪಾಲ್ ಮಂಡಲ್(JDU MLA Gopal Mandal) ಅಲಿಯಾಸ್ ನರೇಂದ್ರ ಕುಮಾರ್ ನೀರಜ್ ಅವರು ರೈಲು ಪ್ರಯಾಣದ ವೇಳೆ ಒಳಉಡುಪಿನಲ್ಲಿ ಕಾಣಿಸಿಕೊಂಡು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಶಾಸಕರ ಆಕ್ಷೇಪಾರ್ಹ ವರ್ತನೆ ಬಗ್ಗೆ ಸಹ ಪ್ರಯಾಣಿಕರು ಪ್ರಶ್ನಿಸಿದ್ದಾರೆ.
ಶಾಸಕ ಗೋಪಾಲ್ ಮಂಡಲ್ ಅವರು ತೇಜಸ್ ರಾಜಧಾನಿ ಎಕ್ಸ್ಪ್ರೆಸ್ನ (Tejas Rajdhani Express) ಮೊದಲ ಎಸಿ ಕಂಪಾರ್ಟ್ಮೆಂಟ್ನಲ್ಲಿ ಪಾಟ್ನಾದಿಂದ ನವದೆಹಲಿಗೆ ಪ್ರಯಾಣಿಸುವಾಗ ಹೊರ ಉಡುಪು ಇಲ್ಲದೆ ಕಾಣಿಸಿಕೊಂಡಿರುವ ಫೋಟೋಗಳು ಬಯಲಾಗಿವೆ. ಕೆಲ ಸಹ ಪ್ರಯಾಣಿಕರು ಎಂಎಲ್ಎ ಅವತಾರ ಕಂಡು ಗಾಬರಿಯಾಗಿ ಚೀರಿಕೊಂಡಿದ್ದಾರೆ. ನಂತರ ಅವರ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಶಾಸಕರು ಮತ್ತು ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದಿದೆ.
ಕೆಲ ಪ್ರಯಾಣಿಕರು ಆಕ್ಷೇಪ ಎತ್ತಿದಾಗ ಶಾಸಕರು ಅವರನ್ನು ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರಶ್ನಿಸಿದ ಸಹ ಪ್ರಯಾಣಿಕರನ್ನು ಥಳಿಸಲು ಯತ್ನಿಸಿದ್ದಾರೆ. ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆಯನ್ನು ರೈಲ್ವೆ ಪೊಲೀಸ್ ಪಡೆ (RPF) ಮತ್ತು ಪ್ರಯಾಣದ ಟಿಕೆಟ್ ಪರೀಕ್ಷಕರು (TTE) ತಡೆದಿದ್ದಾರೆ. ನಂತರ ಶಾಸಕರನ್ನು ಎಕ್ಸ್ಪ್ರೆಸ್ ರೈಲಿನ ಇನ್ನೊಂದು ವಿಭಾಗಕ್ಕೆ ಸ್ಥಳಾಂತರಿಸಿದರು ಎಂದು ವರದಿಯಾಗಿದೆ.
ಘಟನೆ ಬಗ್ಗೆ ಮಾತನಾಡಿದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ಕುಮಾರ್, ಸಹ ಪ್ರಯಾಣಿಕರು ಶಾಸಕರ ವರ್ತನೆಯ ಬಗ್ಗೆ ದೂರು ನೀಡಿದರು. ಪೊಲೀಸರು, ಟಿಕೆಟ್ ಪರೀಕ್ಷಕರು ಶಾಸಕರು ಹಾಗೂ ಸಹ ಪ್ರಯಾಣಿಕರ ಮನವೊಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈಗ ಶಾಸಕ ಮಂಡಲ್ ಅವರು ತಮ್ಮ ಒಳ ಉಡುಪುಗಳಲ್ಲಿ ಪ್ರಯಾಣಿಸುತ್ತಿದ್ದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ತನ್ನ ಒಳ ಉಡುಪುಗಳಲ್ಲಿ ಪ್ರಯಾಣಿಸಲು ಹೊಟ್ಟೆ ನೋವು ಕಾರಣ ಎಂದು ರಾಜಕಾರಣಿ ANI ಗೆ ತಿಳಿಸಿದರು.
ಶಾಸಕರ ಸಬೂಬು..!
ಶಾಸಕ ಮಂಡಲ್ ಅವರು ಶೌಚಾಲಯಕ್ಕೆ ಭೇಟಿ ನೀಡುವ ಧಾವಂತದಲ್ಲಿದ್ದ ಕಾರಣ ಅವರು ರೈಲು ಹತ್ತಿದ ತಕ್ಷಣ ಬಟ್ಟೆಗಳನ್ನು ಅವಸರವಾಗಿ ತೆಗೆದರು ಎಂದು ಸಬೂಬು ನೀಡಿದ್ದಾರೆ. ಟವಲ್ ಅನ್ನು ಸುತ್ತಿಕೊಳ್ಳಲು ಸಮಯವಿಲ್ಲದ ಕಾರಣ ಒಳ ಉಡುಪಿನಲ್ಲೇ ಶೌಚಾಲಯಕ್ಕೆ ಹೋದೆ ಎಂದು ಶಾಸಕರು ಹೇಳಿದ್ದಾರೆ.
ಇನ್ನು ಸಹ ಪ್ರಯಾಣಿಕರು ಆಕ್ಷೇಪ ವ್ಯಕ್ತಿಪಡಿಸಿದರು. ನಾನು ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದೆ. ಅವರು ನನ್ನ ವಯಸ್ಸನ್ನು ನೋಡಬೇಕಿತ್ತು. ನನ್ನ ವಯಸ್ಸು 60 ಜೊತೆಗೆ ಕಂಪಾರ್ಟ್ಮೆಂಟ್ ಒಳಗೆ ಯಾವುದೇ ಮಹಿಳೆ ಅಥವಾ ಹುಡುಗಿ ಇರಲಿಲ್ಲ. ಮಹಿಳಾ ಪ್ರಯಾಣಿಕರಿದ್ದಾಗ ನಾನು ಒಳ ಉಡುಪಿನಲ್ಲಿ ಕಾಣಿಸಿಕೊಂಡಿದ್ದರೆ ತಪ್ಪಾಗುತ್ತಿತ್ತು ಎಂದು ಶಾಸಕರು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: Man Stabs widow Girlfriend: ವಿಧವೆ ಮೇಲೆ ವಿವಾಹಿತನ ಮೋಹ; 2ನೇ ಮದುವೆಗೆ ಒಪ್ಪದಿದ್ದಕ್ಕೆ 17 ಬಾರಿ ಇರಿದೇ ಬಿಟ್ಟ!
ನ್ಯೂಸ್18 ಕನ್ನಡ ಕಳಕಳಿ: ಸಾಂಕ್ರಾಮಿಕ ರೋಗ ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ