ಬೆಂಗಳೂರು: ಅವು ಪುಟ್ಟ ಪ್ರಾಯದಲ್ಲಿಯೇ ಹೆತ್ತಮ್ಮನಿಂದ ದೂರವಾಗಿದ್ದ ನತದೃಷ್ಟರು. ಆದ್ರೆ ತಾಯಿಯ ಪ್ರೀತಿಯ (Mother Love) ವಾತ್ಸಲ್ಯ ಸಿಗದೆ ಪರದಾಡುತ್ತಿದ್ದ ಕಂದಮ್ಮಗಳಿಗೆ ಇಲ್ಲೊಂದು ವೈದ್ಯರ ತಂಡ ಆಸರೆಯಾಗಿದೆ. ತಾಯಿಯ ವಾತ್ಸಲ್ಯದಿಂದ ವಂಚಿತವಾಗಿದ್ದ ಕಂದಮ್ಮಗಳಿಗೆ (Cheetah In Bannerghatta) ಪುನರ್ಜನ್ಮ ನೀಡಿದ್ದು, ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ಹೌದು, ಹೀಗೆ ಮುದ್ದಾದ ಚಿರತೆ ಮರಿಗಳು ಸ್ವಚ್ಛಂದವಾಗಿ ತುಂಟಾಟದಲ್ಲಿ ತೊಡಗಿರುವುದು, ಅವುಗಳನ್ನು ಮಕ್ಕಳಂತೆ ಪಾಲನೆ ಮಾಡುತ್ತಿರುವ ಉದ್ಯಾನವನದ ವೈದ್ಯಕೀಯ ಸಿಬ್ಬಂದಿ ಮತ್ತು ಪ್ರಾಣಿ ಪಾಲಕರು. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ.
11 ಚಿರತೆ ಮರಿಗಳ ರಕ್ಷಣೆ
ಮೈಸೂರು, ಬಿಳಿಗಿರಿರಂಗನಬೆಟ್ಟ, ನರಸೀಪುರ, ಮದ್ದೂರು, ರಾಮನಗರ ಸೇರಿದಂತೆ ನಾನಾ ಕಡೆಗಳಲ್ಲಿ ರೈತರ ಹೊಲಗದ್ದೆಗಳಲ್ಲಿ ತಾಯಿಯಿಂದ ಬೇರ್ಪಟ್ಟು ಅನಾಥವಾಗಿದ್ದ ಒಟ್ಟು 11 ಚಿರತೆ ಮರಿಗಳನ್ನ ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆತರಲಾಗಿತ್ತು.
ಮಕ್ಕಳಂತೆ ಮರಿಗಳ ಪೋಷಣೆ
ಬಹುತೇಕ ಚಿರತೆ ಮರಿಗಳು ಜನಿಸಿ ಕೇವಲ ಒಂದು ವಾರದ ಮರಿಗಳಾಗಿದ್ದು, ತಾಯಿ ಹಾಲಿಲ್ಲದೆ ನಿತ್ರಾಣಗೊಂಡಿದ್ದವು. ಉದ್ಯಾನವನದ ವೈದ್ಯಕೀಯ ಸಿಬ್ಬಂದಿ ಹೆಚ್ಚು ಮುತುವರ್ಜಿ ವಹಿಸಿ ತಾಯಿ ಎದೆ ಹಾಲು ಬದಲಿಗೆ ಕಾಲ ಕಾಲಕ್ಕೆ ಮೇಕೆ ಹಾಲು ಮತ್ತು ಅಗತ್ಯ ವೈದ್ಯಕೀಯ ಸೇವೆ ನೀಡುವ ಮೂಲಕ ಯಶಸ್ವಿಯಾಗಿ ಪೋಷಣೆ ಮಾಡಲಾಗಿದೆ.
ಪ್ರವಾಸಿಗರು ವೀಕ್ಷಿಸಲು ಅವಕಾದೆಯೇ?
ಸದ್ಯ ಮೂರು ತಿಂಗಳು ಪ್ರಾಯದ 11 ಚಿರತೆಗಳು ಉದ್ಯಾನವನದ ಪಶು ಆಸ್ಪತ್ರೆಯಲ್ಲಿ ಪಾಲನೆ ಮಾಡಲಾಗುತ್ತಿದೆ. 8 ಚಿರತೆಗಳನ್ನು ಒಂದು ಗುಂಪು, 3 ಚಿರತೆಗಳ ಮತ್ತೊಂದು ಗುಂಪಾಗಿ ಪ್ರತ್ಯೇಕಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆ ಬಳಿಕ ಈಗಾಗಲೇ ಸಿದ್ದಗೊಳ್ಳುತ್ತಿರುವ ಚಿರತೆ ಸಫಾರಿಯ ಕ್ರಾಲ್ ನಲ್ಲಿ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎಂದು ಉದ್ಯಾನವನದ ವೈದ್ಯಾಧಿಕಾರಿ ಡಾ. ಉಮಾಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ: Ghost Malls: ಬೆಂಗಳೂರಲ್ಲೂ ಇದೆ ಘೋಸ್ಟ್ ಮಾಲ್ಗಳು! ಹೀಗಂದ್ರೇನು?
ಮೇಕೆ ಹಾಲು ಕುಡಿದು ಬೆಳೆಯುತ್ತಿವೆ!
ಇನ್ನೂ ಜನಿಸಿ ವಾರ ಕಳೆದಿದ್ದ ಹಾಲುಗಲ್ಲದ ಪುಟಾಣಿ ಚಿರತೆ ಮರಿಗಳನ್ನು ಹಾರೈಕೆ ಮಾಡುವುದೇ ಸವಾಲಿನ ಕೆಲಸವಾಗಿತ್ತು. ಚಿರತೆ ಮರಿಗಳಿಗೆ ಹರಸಾಹಸಪಟ್ಟು ಮೇಕೆ ಹಾಲು ಕುಡಿಸಲಾಗಿತ್ತು. ಚೇತರಿಸಿಕೊಂಡ ಚಿರತೆ ಮರಿಗಳು ಇದೀಗ ದಿನಕ್ಕೆ ಬೆಳಗ್ಗೆ ಮತ್ತು ಸಂಜೆ ಒಂದು ಲೀಟರ್ ಹಾಲು ಕುಡಿಯುತ್ತಿವೆ. "ಎಲ್ಲಾ ಹನ್ನೊಂದು ಚಿರತೆ ಮರಿಗಳು ಆರೋಗ್ಯವಾಗಿದ್ದು, ಮಕ್ಕಳಂತೆ ಪಾಲನೆ ಪೋಷಣೆ ಮಾಡಿದ್ದರಿಂದ ಹೆಚ್ಚು ಲವಲವಿಕೆಯಿಂದಿವೆ" ಎಂದು ಪ್ರಾಣಿ ಪಾಲಕಿ ಸಾವಿತ್ರಮ್ಮ ತಿಳಿಸಿದ್ದಾರೆ.
ಇದನ್ನೂ ಓದಿ: Ulsoor Lake: ಹಲಸೂರು ಕೆರೆ ಹೆಸರ ಹಿಂದಿನ ರಹಸ್ಯ ಒಂದು ಮರ!
ದತ್ತು ಪಡೆಯಲು ಅವಕಾಶ
ಒಟ್ಟಿನಲ್ಲಿ ತಾಯಿಯ ಆರೈಕೆ ಇಲ್ಲದೆ ಕಂಗಾಲಾಗಿದ್ದ ಚಿರತೆ ಮರಿಗಳಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರು ಹಾಗೂ ಸಿಬ್ಬಂದಿಗಳು ಆಸರೆಯಾಗಿದ್ದಾರೆ. ಸದ್ಯ ಪಶು ಆಸ್ಪತ್ರೆ ಅವರಣದಲ್ಲಿ ಬೆಳೆಯುತ್ತಿರುವ ಮುದ್ದಾದ ಚಿರತೆ ಮರಿಗಳನ್ನ ದತ್ತು ಪಡೆದುಕೊಳ್ಳುವ ಅವಕಾಶವಿದ್ದು, ಪ್ರಾಣಿ ಪ್ರಿಯರು ದತ್ತು ಪಡೆಯಬಹುದಾಗಿದೆ.
ವರದಿ: ಆದೂರು ಚಂದ್ರು, ನ್ಯೂಸ್ 18 ಆನೇಕಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ