ಬೆಂಗಳೂರು: ಅತೀ ನಿರೀಕ್ಷೆ ಹುಟ್ಟಿಸಿರುವ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ (Bengaluru Mysuru Expressway) ಇನ್ನೇನು ಸಾರ್ವಜನಿಕರ ಬಳಕೆಗೆ ಅಧಿಕೃತವಾಗಿ ಲೋಕಾರ್ಪಣೆಯಾಗಲಿದೆ. ಈ ಹೆದ್ದಾರಿ ಮೇಲೆ ಕುತೂಹಲ, ನಿರೀಕ್ಷೆಯೇನೋ ಹೆಚ್ಚಾಗುತ್ತಿದೆ. ಆದರೆ ಇದೇ ಹೆದ್ದಾರಿ ಇದೀಗ ಪ್ರಯಾಣಿಕರಿಗೆ ಸಮಸ್ಯೆಯೊಂದನ್ನು ತಂದೊಡ್ಡಿದೆ ಎಂಬ ಕೂಗು ಕೇಳಿಬಂದಿದೆ.
ಈಗಾಗಲೇ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಸಾರ್ವಜನಿಕರಿಗೆ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸಾರ್ವಜನಿಕರು ಬೆಂಗಳೂರು-ಮೈಸೂರಿಗೆ ಇದೇ ಮಾರ್ಗವಾಗಿ ಪ್ರಯಾಣ ಬೆಳೆಸುತ್ತಿದ್ದಾರೆ.
3 ಗಂಟೆಯಿಂದ ಒಂದೂವರೆ ಗಂಟೆಗೆ ಇಳಿದ ಪ್ರಯಾಣದ ಅವಧಿ
ಈ ದಶಪಥ ಹೆದ್ದಾರಿಯಿಂದ ಬೆಂಗಳೂರು-ಮೈಸೂರು ಪ್ರಯಾಣದ ಅವಧಿ ಈ ಮುನ್ನ ಇದ್ದ 3 ಗಂಟೆಯಿಂದ ಒಂದೂವರೆ ಗಂಟೆಗೆ ಇಳಿದಿದೆ! ಇದರಿಂದ ಪ್ರಯಾಣಿಕರಿಗೆ ಲಾಭವೇನೋ ಆಗಿದೆ. ಆದರೂ ಸಮಸ್ಯೆಯೊಂದನ್ನು ಎದುರಿಸುವಂತಾಗಿದೆ.
ಎಲ್ಲಿ ಟ್ರಾಫಿಕ್ ಸಮಸ್ಯೆ ಆಗ್ತಿದೆ?
ಮೈಸೂರು ಕಡೆಯಿಂದ ವೇಗವಾಗಿ ಬಂದು ಬೆಂಗಳೂರು ಸೇರುವ ಉತ್ಸಾಹದಲ್ಲಿರುವ ಪ್ರಯಾಣಿಕರು ಬೆಂಗಳೂರು ನಗರ ಪ್ರವೇಶ ಮಾಡುತ್ತಿದ್ದಂತೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಕಂಗೆಡುವಂತಾಗಿದೆ.
ಬಳಲಿ ಬೆಂಡಾಗುತ್ತಿರುವ ಪ್ರಯಾಣಿಕರು
ಮೈಸೂರಿನಿಂದ ಬೆಂಗಳೂರನ್ನು ಪ್ರವೇಶಿಸುವಾಗ ರಾಜರಾಜೇಶ್ವರಿ ಆಸ್ಪತ್ರೆ ಬಳಿ ಎಕ್ಸ್ಪ್ರೆಸ್ ಕಾರಿಡಾರ್ ನಂತರ ಟ್ರಾಫಿಕ್ ಜಾಮ್ನಲ್ಲಿ ಪ್ರಯಾಣಿಕರು ಬಳಲುವಂತಾಗಿದೆ. ಕೇವಲ 90 ನಿಮಿಷದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬರುವ ನಾಗರಿಕರ ಖುಷಿ ಟ್ರಾಫಿಕ್ ಜಾಮ್ ಬಿಸಿಯಲ್ಲಿ ಕರಗಿ ಹೋಗುತ್ತದೆ.
ಎಕ್ಸ್ಪ್ರೆಸ್ ಕಾರಿಡಾರ್ನ ಮೇಲ್ಸೇತುವೆಯ 3 ಪಥ, ಸೇತುವೆ ಕೆಳಗಿನ ದ್ವಿಪಥ ರಸ್ತೆ, ಸರ್ವಿಸ್ ರಸ್ತೆಯಲ್ಲಿ ಬರುವ ವಾಹನಗಳು ಒಗ್ಗೂಡಿ ಪ್ರಯಾಣಿಸಬೇಕಿದೆ. ರಸ್ತೆಯೂ ಚಿಕ್ಕದಾಗಿದ್ದು 5 ಪಥದಲ್ಲಿ ಬಂದ ವಾಹನಗಳೆಲ್ಲವೂ 2 ಪಥದಲ್ಲಿ ಸಂಚರಿಸುವ ಅನಿವಾರ್ಯತೆ ಉಂಟಾಗಿದೆ.
ಈ ಎಕ್ಸ್ಪ್ರೆಸ್ವೇ ಕಾಮಗಾರಿಯು ಎರಡು ಹಂತಗಳಲ್ಲಿ ನಡೆದಿತ್ತು. ಬೆಂಗಳೂರಿನಿಂದ ಮದ್ದೂರು ತಾಲೂಕಿನ ನಿಡಘಟ್ಟಕ್ಕೆ ಸುಮಾರು 56 ಕಿ.ಮೀ ಕಾಮಗಾರಿ ಮೊದಲ ಹಂತದಲ್ಲಿ ನಡೆದರೆ, 61 ಕಿ. ಮೀ ಉದ್ದದ ಎರಡನೇ ಪ್ಯಾಕೇಜ್, ನಿಡಘಟ್ಟದಿಂದ ಮೈಸೂರಿಗೆ ಸಂಪರ್ಕಿಸಿದೆ.
ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬೆಂಗಳೂರು-ನಿಡಘಟ್ಟ ಮಾರ್ಗದಲ್ಲಿ ಫೆಬ್ರವರಿ 15 ರೊಳಗೆ ಟೋಲ್ ವಿಧಿಸಲು ಪ್ರಾರಂಭಿಸಲಿದೆ. ಅದೇ ರೀತಿ ನಿಡಘಟ್ಟ ಮತ್ತು ಮೈಸೂರು ನಡುವಿನ ಟೋಲ್ನ ಹಂತ -2 ನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರಲಾಗುವುದು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಇದನ್ನೂ ಓದಿ: Bengaluru Mysuru Expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಲೋಕಾರ್ಪಣೆ ಕುರಿತು ಮಹತ್ವದ ಮಾಹಿತಿ ಬಹಿರಂಗ
ಮಂಡ್ಯ ಬೈಪಾಸ್ ಸಾರ್ವಜನಿಕರ ಸಂಚಾರಕ್ಕೆ ಮುಕ್ತ
ಅತ್ಯಂತ ನಿರೀಕ್ಷೆ ಹುಟ್ಟಿಸಿದ್ದ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಮಂಡ್ಯ ಬೈಪಾಸ್ (Mandya Bypass) ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಈ ಕುರಿತು ಸಂಸದ ಪ್ರತಾಪ್ ಸಿಂಹ (MP Pratap Simha) ಇತ್ತೀಚಿಗಷ್ಟೇ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Fish Meals In Bengaluru: ಬೆಂಗಳೂರಲ್ಲಿ ಕಡಿಮೆ ಬೆಲೆಯಲ್ಲಿ ಭರ್ಜರಿ ಮೀನೂಟ! 100 ಕ್ಯಾಂಟೀನ್ ಆರಂಭ
ಗ್ರೀನ್ಫೀಲ್ಡ್ ಕಾರಿಡಾರ್ನ ಭಾಗ ಈ ಹೆದ್ದಾರಿ
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ನೀಡಿರುವ ಮಾಹಿತಿಯ ಪ್ರಕಾರ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಗ್ರೀನ್ಫೀಲ್ಡ್ ಕಾರಿಡಾರ್ ಯೋಜನೆಯ ಭಾಗವಾಗಿದೆ. ಈ 10 ಪಥದ ಹೆದ್ದಾರಿಯ ಕುರಿತು ಈಗಾಗಲೇ ಹೆಚ್ಚಿನ ನಿರೀಕ್ಷೆ ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ