ಬೆಂಗಳೂರು: ರಾಜ್ಯದ ಮೊದಲ ಎಕ್ಸ್ಪ್ರೆಸ್ ವೇ ಆಗಿರುವ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ (Bengaluru Mysuru Expressway) ಬಗ್ಗೆ ದಿನೇ ದಿನೇ ಸಾರ್ವಜನಿಕರಲ್ಲಿ ಕುತೂಹಲ ಹೆಚ್ಚುತ್ತಿದೆ. ಯಾವಾಗ ಈ ದಶಪಥ ಹೆದ್ದಾರಿ ಅಧಿಕೃತವಾಗಿ ಓಪನ್ ಆಗುತ್ತೆ ಅನ್ನೋದಕ್ಕಿಂತಲೂ ಹೆಚ್ಚು ಈ ಹೆದ್ದಾರಿಯಲ್ಲಿನ ಟೋಲ್ ಕುರಿತು ಕುತೂಹಲ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಟೋಲ್ Bengaluru Mysuru Expressway Toll) ಕುರಿತು ಭರಪೂರ ಚರ್ಚೆ ನಡೆಯುತ್ತಿದೆ.
ಫೆಬ್ರವರಿ 15ರ ಒಳಗೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಟೋಲ್ ಸಂಗ್ರಹ ಆರಂಭವಾಗಲಿದೆ ಎಂದು ಈ ಮುನ್ನ ವರದಿಯಾಗಿತ್ತು. ಆದರೆ ಈ ಕುರಿತು ಯಾವುದೇ ಅಧಿಕೃತ ಆದೇಶ ಇನ್ನೂ ಪ್ರಕಟವಾಗಿಲ್ಲ ಎಂದು ಹೇಳಲಾಗಿದೆ. ಜೊತೆಗೆ ಸರ್ವಿಸ್ ರಸ್ತೆ ಶುರುವಾಗುವವರೆಗೂ ಟೋಲ್ ಸಂಗ್ರಹ ಆರಂಭವಾಗುದು ಡೌಟ್ ಎನ್ನಲಾಗಿದೆ.
ಈಗಾಗಲೇ 2 ಟೋಲ್ ಬೂತ್ ನಿರ್ಮಾಣ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಈಗಾಗಲೇ ಬಿಡದಿ ಮತ್ತು ಶ್ರೀರಂಗಪಟ್ಟಣದ ಬಳಿ ಟೋಲ್ ಬೂತ್ಗಳನ್ನು ನಿರ್ಮಿಸಲಾಗಿದೆ. ಆದರೆ ಸರ್ವಿಸ್ ರಸ್ತೆ ಆರಂಭವಾಗದೇ ಟೋಲ್ ಸಂಗ್ರಹಕ್ಕೆ ಅನುವು ಮಾಡಿಕೊಡಬಾರದು ಎಂಬ ಆದೇಶವಿದೆ. ಹೀಗಾಗಿ ಇನ್ನೂ ಈ ಟೋಲ್ ಬೂತ್ ಆರಂಭಗೊಂಡಿಲ್ಲ ಎಂದು ಹೇಳಲಾಗಿದೆ.
ಫ್ಲೈ ಓವರ್ಗಳಲ್ಲಿ ಕಿಲೋ ಮೀಟರ್ಗೆ 3 ರೂ. ಟೋಲ್
ವರದಿಗಳ ಪ್ರಕಾರ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಪ್ರತಿ ಕಿಲೋ ಮೀಟರ್ಗೆ 2 ರೂ.ನಂತೆ ಟೋಲ್ ಸಂಗ್ರಹಿಸುವ ಸಾಧ್ಯತೆ ದಟ್ಟವಾಗಿದೆ. ಈ ಶುಲ್ಕ ಫ್ಲೈ ಓವರ್ಗಳಲ್ಲಿ ಕಿಲೋ ಮೀಟರ್ಗೆ 3 ರೂ. ಗೆ ಏರುವ ಸಾಧ್ಯತೆಯಿದೆ. ಒಟ್ಟಾರೆ ಬೆಂಗಳೂರಿನಿಂದ ಮೈಸೂರಿಗೆ ಈ ಹೆದ್ದಾರಿಯಲ್ಲಿ ತೆರಳಲು ಅಂದಾಜು 300 ರೂ. ಟೋಲ್ ಶುಲ್ಕ ಆಗುವ ಸಂಭಾವ್ಯತೆಯಿದೆ.
ಈ ಎಕ್ಸ್ಪ್ರೆಸ್ವೇ ಕಾಮಗಾರಿಯು ಎರಡು ಹಂತಗಳಲ್ಲಿ ನಡೆದಿತ್ತು. ಬೆಂಗಳೂರಿನಿಂದ ಮದ್ದೂರು ತಾಲೂಕಿನ ನಿಡಘಟ್ಟಕ್ಕೆ ಸುಮಾರು 56 ಕಿ.ಮೀ ಕಾಮಗಾರಿ ಮೊದಲ ಹಂತದಲ್ಲಿ ನಡೆದರೆ, 61 ಕಿ. ಮೀ ಉದ್ದದ ಎರಡನೇ ಪ್ಯಾಕೇಜ್, ನಿಡಘಟ್ಟದಿಂದ ಮೈಸೂರಿಗೆ ಸಂಪರ್ಕಿಸಿದೆ.
ಮಂಡ್ಯ ಬೈಪಾಸ್ ಸಾರ್ವಜನಿಕರ ಸಂಚಾರಕ್ಕೆ ಮುಕ್ತ
ಅತ್ಯಂತ ನಿರೀಕ್ಷೆ ಹುಟ್ಟಿಸಿದ್ದ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಮಂಡ್ಯ ಬೈಪಾಸ್ (Mandya Bypass) ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಈ ಕುರಿತು ಸಂಸದ ಪ್ರತಾಪ್ ಸಿಂಹ (MP Pratap Simha) ಇತ್ತೀಚಿಗಷ್ಟೇ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Hubballi Airport: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರು?
ಗ್ರೀನ್ಫೀಲ್ಡ್ ಕಾರಿಡಾರ್ನ ಭಾಗ ಈ ಹೆದ್ದಾರಿ
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ನೀಡಿರುವ ಮಾಹಿತಿಯ ಪ್ರಕಾರ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಗ್ರೀನ್ಫೀಲ್ಡ್ ಕಾರಿಡಾರ್ ಯೋಜನೆಯ ಭಾಗವಾಗಿದೆ. ಈ 10 ಪಥದ ಹೆದ್ದಾರಿಯ ಕುರಿತು ಈಗಾಗಲೇ ಹೆಚ್ಚಿನ ನಿರೀಕ್ಷೆ ವ್ಯಕ್ತವಾಗಿದೆ.
ಬೈಕ್-ಆಟೋಗಳಿಗಿಲ್ಲ ಅವಕಾಶ
ಬೆಂಗಳೂರು-ಮೈಸೂರು ನಡುವಿನ ಎಕ್ಸ್ಪ್ರೆಸ್ ಕಾರಿಡಾರ್ ಸದ್ಯದಲ್ಲೇ ಸಾರ್ವಜನಿಕರ ಓಡಾಟಕ್ಕೆ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಈ ಹೆದ್ದಾರಿಯಲ್ಲಿ ಬೈಕ್ ಮತ್ತು ಆಟೋಗಳ ಓಡಾಟಕ್ಕೆ ಅವಕಾಶವಿಲ್ಲ ಎಂದು ಈಗಾಗಲೇ ಮಾಹಿತಿ ನೀಡಲಾಗಿದೆ. ಬೆಂಗಳೂರು-ಮೈಸೂರು ನಡುವಿನ ಎಕ್ಸ್ಪ್ರೆಸ್ ಕಾರಿಡಾರ್ ಕಾಮಗಾರಿ ವೇಗದಿಂದ ನಡೆಯುತ್ತಿದ್ದು 2023 ರ ಮಾರ್ಚ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Bengaluru Traffic Rules: ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ, ಪಾರ್ಕಿಂಗ್ ಬ್ಯಾನ್!
ಹೆದ್ದಾರಿಯಲ್ಲಿರಲಿದೆ ಹಲವು ಸೌಲಭ್ಯ
ಈ ಹೆದ್ದಾರಿಯು ಒಟ್ಟು 44 ಸಣ್ಣ ಸೇತುವೆಗಳನ್ನು ಹೊಂದಿದ್ದು 4 ರೈಲು ಮೇಲ್ಸೇತುವೆಗಳನ್ನು ಹೊಂದಿರಲಿದೆ. ಈ ಹೆದ್ದಾರಿಯಲ್ಲಿ ಅಲ್ಲಲ್ಲಿ ಫುಡ್ ಕೋರ್ಟ್ಗಳು, ವಿಶ್ರಾಂತಿಗೆ ಕೊಠಡಿಗಳು ಸಹ ನಿರ್ಮಾಣವಾಗಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ