ಆನೇಕಲ್: ಅದು ಕಾಡನ್ನು ಕಾಯುವ ಶಕ್ತಿ ದೇವತೆ. ಅದ್ರಲ್ಲೂ ಬುಡಕಟ್ಟು ಜನಾಂಗದ (Tribal Community) ಆರಾಧ್ಯ ದೈವ. ಆದ್ರೆ ಸುರಕ್ಷಿತ ಅಭಯಾರಣ್ಯ ಘೋಷಣೆ ಬಳಿಕ ಅಲ್ಲಿನ ಬುಡಕಟ್ಟು ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಜೊತೆಗೆ ಕಾಡುದೇವತೆ ಪೂಜೆಗೆ ಅವಕಾಶ ನಿರಾಕರಿಸಲಾಗಿತ್ತು, ಇದೀಗ ಬುಡಕಟ್ಟು ಜನರ ಕಾಡುದೇವತೆ ಜಾತ್ರೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಹೌದು, ಬೆಂಗಳೂರು ಹೊರವಲಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವರದಹಳ್ಳಿಕಟ್ಟೆಯಲ್ಲಿ ಹಲವು ವರ್ಷಗಳಿಂದ ನಿಂತಿದ್ದ ಮೂಗು ಮಾರಮ್ಮ ದೇವಿ ಮತ್ತು ಬಸವೇಶ್ವರ ಸ್ವಾಮಿಯ ಜಾತ್ರೆಯು ವಿಧಾನ ಪರಿಷತ್ ಸದಸ್ಯ ಶಾಂತರಾಮಸಿದ್ದಿ ಅವರ ನೇತೃತ್ವದಲ್ಲಿ ಚಾಲನೆ ದೊರೆತಿದೆ.
ಒಕ್ಕಲೆಬ್ಬಿಸಿದ ನಂತರ ಆಚರಣೆ ಬಂದ್!
ಸುಮಾರು ಮೂರು ದಶಕಗಳ ಹಿಂದೆ ವರದಹಳ್ಳಿಕಟ್ಟೆಯಲ್ಲಿ ಹಲವಾರು ಬುಡಕಟ್ಟು ಆಚರಣೆಗಳು ನಡೆಯುತ್ತಿದ್ದವು. ಆದರೆ ಈ ಭಾಗದ ಜನತೆಯನ್ನು ಒಕ್ಕಲೆಬ್ಬಿಸಿದ ನಂತರ ಈ ಆಚರಣೆಗಳು ನಡೆಯುತ್ತಿರಲಿಲ್ಲ. ಆದರೆ ಈ ವರ್ಷದಿಂದ ಮೂಗು ಮಾರಮ್ಮ ದೇವಿಯ ಜಾತ್ರೆಯನ್ನು ಮತ್ತೆ ಆಚರಿಸಲಾಗುತ್ತಿದೆ.
ರಾಜ್ಯದಲ್ಲಿವೆ 53 ಬುಡಕಟ್ಟು ಜನಾಂಗಗಳು
ದೇಶದಲ್ಲಿರುವ ಸುಮಾರು 12 ಕೋಟಿ ಬುಡಕಟ್ಟು ಜನಾಂಗಗಳಿಗೆ ಅರಣ್ಯ ಹಕ್ಕು ಕಲ್ಪಿಸಿಕೊಡಲು ವಿವಿಧ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ದೇಶದಲ್ಲಿ ಸುಮಾರು 400 ಬುಡಕಟ್ಟು ಸಮಾಜಗಳಿವೆ. ರಾಜ್ಯದಲ್ಲಿ 53 ಬುಡಕಟ್ಟು ಜನಾಂಗಗಳಿವೆ.
ಬುಡಕಟ್ಟು ಜನಾಂಗಗಳಿಗೆ ಸೂಕ್ತ ಅವಕಾಶ
ರಾಮನಗರ, ಮೈಸೂರು, ಚಾಮರಾಜನಗರ, ಮಡಿಕೇರಿ, ಚಿಕ್ಕಮಗಳೂರು, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬುಡಕಟ್ಟು ಜನಾಂಗಗಳನ್ನು ಗುರುತಿಸಿ ಅವರ ಧಾರ್ಮಿಕ ಸ್ಥಳಗಳು, ಸ್ಮಶಾನ, ಕೃಷಿ ಭೂಮಿ ಸೇರಿದಂತೆ ಸಾಧ್ಯವಿರುವ ಅವಕಾಶಗಳನ್ನು ಕಲ್ಪಿಸಿಕೊಡಲು ಮತ್ತು ಶಿಕ್ಷಣ ದೊರೆಯುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ತಿಳಿಸಿದ್ದಾರೆ.
ಪೂಜನೀಯ ಸ್ಥಳಗಳು ಕೈತಪ್ಪಿದ್ದವು
ಇನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವರದೇನಹಳ್ಳಿ ಎಂಬ ಪುರಾತನ ಗ್ರಾಮದಲ್ಲಿ ತಲತರಂತರಗಳಿಂದಲೂ ಬುಡಕಟ್ಟು ಜನಾಂಗ ಜೀವನ ಸಾಗಿಸುತ್ತಿದ್ದಾರೆ. ರಾಷ್ಟ್ರೀಯ ಸುರಕ್ಷಾ ಅಭಯಾರಣ್ಯ 1977 ಕಾಯ್ದೆ ಪ್ರಕಾರ ಬುಡಕಟ್ಟು ಜನಾಂಗವನ್ನ ಬೇರೆ ಶಿಫ್ಟ್ ಮಾಡಲಾಗಿತ್ತು. ಆದರೆ ತಲೆತಲಾಂತರಗಳಿಂದ ಜೀವನ ಸಾಗಿಸುತ್ತಿದ್ದ ಆ ಗ್ರಾಮದಲ್ಲಿ ಗ್ರಾಮವಾಸಿಗಳು ಪೂಜನೀಯ ಸ್ಥಳಗಳನ್ನು ಬಿಟ್ಟು ಹೋಗಿದ್ದರು.
ಇದನ್ನೂ ಓದಿ: Puttur: ಐಸ್ ಕ್ಯಾಂಡಿ ಮಾರಿ 15 ಲಕ್ಷ ಆದಾಯ! ಸೂಜಿಮೆಣಸಿಂದಲೂ ಐಸ್ಕ್ರೀಮ್ ತಯಾರಿ
ಈ ಬಗ್ಗೆ ಸರ್ಕಾರಕ್ಕೆ ಎರಡು ಬೇಡಿಕೆಗಳನ್ನು ಬುಡಕಟ್ಟು ಜನಾಂಗದವರು ಇಟ್ಟಿದ್ದರು. ಹೀಗಾಗಿ ಸಮಿತಿಯನ್ನ ರಚನೆ ಮಾಡಿ ಅರಣ್ಯ ಹಕ್ಕು ಸಮಿತಿ ಸಮಾಜ ಕಲ್ಯಾಣ ಇಲಾಖೆ ಕಂದಾಯ ಇಲಾಖೆ ವನವಾಸಿ ಕಲ್ಯಾಣ ಸಂಘ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂಗು ಮಾರಮ್ಮ ದೇವಿ ಮತ್ತು ಬಸವೇಶ್ವರ ಜಾತ್ರೆಗೆ ಅನುವು ಮಾಡಿ ಕೊಟ್ಟಿದೆ. ಇದೀಗ ಜಾತ್ರೆಗೆ ವಿಜೃಂಭಣೆಯ ಚಾಲನೆ ದೊರೆತಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ಬಳಿಕ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಲಾಗಿತ್ತು. ಸಾಕಷ್ಟು ಹೋರಾಟ ನಡೆಸಿ ಹಕ್ಕುಪತ್ರಗಳನ್ನು ಪಡೆಯಲಾಯಿತು ಎಂದು ಬುಡಕಟ್ಟು ಜನಾಂಗದ ಮುಖಂಡ ಶರಣಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: Helicopter Factory In Tumkur: ನಮ್ಮ ತುಮಕೂರಿನಲ್ಲಿ ಭಾರತದಲ್ಲೇ ಅತಿ ದೊಡ್ಡ ಹೆಲಿಕಾಪ್ಟರ್ ಕಾರ್ಖಾನೆ!
ಒಟ್ಟಾರೆ ಕರ್ನಾಟಕದ ಬುಡಕಟ್ಟು ಜನಾಂಗಗಳ ಅರಣ್ಯ ಹಕ್ಕು ಸಮಿತಿಯಿಂದ ತಮ್ಮ ಹಕ್ಕುಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಬುಡಕಟ್ಟು ಜನಾಂಗದ ಜೊತೆಗೆ ಸಮಾಲೋಚನೆ ನಡೆದಿದೆ. ಇನ್ಮುಂದೆ ಆದ್ರೂ ಬುಡಕಟ್ಟು ಜನಾಂಗಗಳ ಸಮಸ್ಯೆಗಳು ಬಗೆ ಸರ್ಕಾರ ಗಮನ ಹರಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಆದೂರು ಚಂದ್ರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ