ಬೆಂಗಳೂರು: ಬೃಹತ್ ಆದಿಯೋಗಿ ಮೂರ್ತಿಯೆದುರು ಸೆಲ್ಫಿ, ಫೋಟೋ ತೆಗೆದು ವಾಟ್ಸಪ್ ಸ್ಟೇಟಸ್ಗೆ, ಫೇಸ್ಬುಕ್ಗೆ ಹಾಕ್ಕೊಳ್ಳೋದನ್ನ ನೋಡಿದ್ದೀರಿ, ಅರೇ! ಈ ಮೂರ್ತಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳೋಕೆ ತಮಿಳುನಾಡಿನ ಕೊಯಮತ್ತೂರಿಗೇ ಹೋಗಬೇಕಲ್ಲ, ಸ್ವಲ್ಪ ಹತ್ತಿರದಲ್ಲೇ ಇದ್ರೆ ನಾವೂ ಒಂದಿನ ಹೋಗಿ ಬರಬಹುದಿತ್ತು ಅನ್ನೋ ಯೋಚನೆ ಬಂದಿರಬಹುದು. ನಿಮಗೆಂದೇ ಪ್ರಮುಖ ಸುದ್ದಿಯೊಂದನ್ನು ಸದ್ಗುರು ಇಶಾ ಫೌಂಡೇಶನ್ (Isha Foundation) ಹಂಚಿಕೊಂಡಿದೆ. ನಮ್ಮ ಕರ್ನಾಟಕದಲ್ಲೇ (Adiyogi In Karnataka), ಅದೂ ರಾಜಧಾನಿ ಬೆಂಗಳೂರಿನ (Bengaluru News) ಹತ್ತಿರವೇ ಬೃಹತ್ ಆದಿಯೋಗಿ ಮೂರ್ತಿ (Adiyogi Near Bengaluru) ಉದ್ಘಾಟನೆಗೆ ಸಜ್ಜಾಗಿದೆ. ಎಲ್ಲಿ ಈ ಆದಿಯೋಗಿ ಮೂರ್ತಿ ಇರೋದು? ಹೇಗೆ ಹೋಗೋದು? ಇತ್ಯಾದಿ ಎಲ್ಲ ವಿವರ ನಾವ್ ನಿಮಗೆ ಹೇಳ್ತೀವಿ ನೋಡಿ.
ಬೆಂಗಳೂರಿನ ಪಕ್ಕದಲ್ಲೇ ಇರುವ ಚಿಕ್ಕಬಳ್ಳಾಪುರದಲ್ಲಿ ಹೊಸ ಆದಿಯೋಗಿ ಪ್ರತಿಮೆಯನ್ನು ಇಶಾ ಫೌಂಡೇಶನ್ ಸ್ಥಾಪಿಸಿದೆ. ಚಿಕ್ಕಬಳ್ಳಾಪುರದ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಗದೇವರಬೆಟ್ಟದ ತಪ್ಪಲಿನಲ್ಲೇ ಇದೆ ಈ ಆದಿಯೋಗಿ ಮೂರ್ತಿ. ಈ ಸ್ಥಳಕ್ಕೆ ಸದ್ಗುರು ಸನ್ನಿಧಿ (Sadghuru Sannidhi) ಎಂದೇ ಹೆಸರಿಸಲಾಗಿದೆ. ಜನವರಿ 15ರಂದು ಈ ಆದಿಯೋಗಿ ಮೂರ್ತಿ ವಿದ್ಯುಕ್ತವಾಗಿ ಲೋಕಾರ್ಪಣೆಗೊಳ್ಳಲಿದೆ.
ಬರೋಬ್ಬರಿ 112 ಅಡಿ ಎತ್ತರದ ಮೂರ್ತಿ
ಈ ಆದಿಯೋಗಿ ಮೂರ್ತಿ ಕೊಯಂಬತ್ತೂರಿನಲ್ಲಿರುವ ಆದಿಯೋಗಿ ಮೂರ್ತಿಯಷ್ಟೇ, ಅಂದರೆ ಬರೋಬ್ಬರಿ 112 ಅಡಿ ಎತ್ತರವಿದೆ. ಕೊಯಮತ್ತೂರಿನ ಆದಿಯೋಗಿ ಮೂರ್ತಿ ಸನ್ನಿಧಿಯಲ್ಲಿ ಶಿವರಾತ್ರಿ ಆಚರಣೆ ವಿಜೃಂಭಣೆಯಿಂದ ನಡೆದರೆ ಚಿಕ್ಕಬಳ್ಳಾಪುರದಲ್ಲಿ ಸಂಕ್ರಾಂತಿ ವೈಭವ ಕಳೆಗಟ್ಟಲಿದೆ. ಕೃಷಿ ಸಮುದಾಯದ ಸುಗ್ಗಿ ಹಬ್ಬದ ಪ್ರತೀಕವಾಗಿ ಸಂಕ್ರಾಂತಿಗೆ ಹೊಸ ಮೆರುಗು ನೀಡಲು ಇಶಾ ಫೌಂಡೇಶನ್ ನಿರ್ಧರಿಸಿದೆ.
ಈ ಎಲ್ಲ ವಿಶೇಷಗಳೂ ಇರಲಿವೆ
ಚಿಕ್ಕಬಳ್ಳಾಪುರದ ಆದಿಯೋಗಿ ಮೂರ್ತಿ ಆವರಣದಲ್ಲೇ ನವಗ್ರಹ ದೇಗುಲವಿದೆ. ಇಲ್ಲೇ ವಿಶೇಷ ಲಿಂಗ ಭೈರವಿ ದೇವಿಯ ದರ್ಶನ ಮಾಡಬಹುದಾಗಿದೆ. ಅಲ್ಲದೇ ಒಂದು ಪುಟ್ಟ ಜಲಪಾತವೂ ಸಹ ನಿಮ್ಮ ದಾರಿಯಲ್ಲಿ ಸಿಗಲಿದೆ!
ಸದ್ಗುರು ಸನ್ನಿಧಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಇದನ್ನೂ ಓದಿ: Vande Bharat Express Train: ಬೆಂಗಳೂರಿನಿಂದ ಬೆಳಗಾವಿಯವರೆಗೂ ವಂದೇ ಭಾರತ್!
ಇಲ್ಲಿಗೆ ಬರೋದು ಹೇಗೆ?
112 ಅಡಿ ಎತ್ತರದ ಆದಿಯೋಗಿಯ ದರ್ಶನ ಪಡೆಯಲು ನೀವು ಬೆಂಗಳೂರಿನಿಂದ ಕೇವಲ 65 ಕಿಲೋ ಮೀಟರ್ ಪ್ರಯಾಣಿಸಿದರೆ ಸಾಕು! ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಸ್ಟ್ 45 ಕಿಲೋ ಮೀಟರ್, ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ 63 ಕಿಲೋ ಮೀಟರ್ ಪಯಣಿಸಿದರೆ ನೀವು ಆದಿಯೋಗಿ ದರ್ಶನ ಮಾಡಬಹುದು. ಸದ್ಯ ಈ ಆದಿಯೋಗಿ ಮೂರ್ತಿಯ ಹತ್ತಿರ ಇಶಾ ಫೌಂಡೇಶನ್ನ ಚಿಕ್ಕ ಕ್ಯಾಂಟೀನ್ ಇದೆ ಬಿಟ್ಟರೆ ಬೇರೆ ಯಾವ ಸೌಲಭ್ಯವೂ ಇಲ್ಲ.
ಇದನ್ನೂ ಓದಿ: Bengaluru One: ಬೆಂಗಳೂರು ಒನ್ನಲ್ಲಿ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಬಹುದಾ?
ಬಸ್ ಮೂಲಕ ಬರೋದಾದ್ರೆ ಹೀಗೆ ಬನ್ನಿ
ಬಸ್ ಮೂಲಕ ಇಲ್ಲಿಗೆ ಬರ್ತೀರಿ ಅಂತಾದ್ರೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಬಸ್ ಹತ್ತಿ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಬಸ್ ಹತ್ತಿದರೆ ದೇವನಹಳ್ಳಿ ರಾಣಿ ಸರ್ಕಲ್ ಬಳಿ ನಿಮಗೆ ಆದಿಯೋಗಿ ಬಳಿ ತಲುಪಲು ಬಸ್ ಸಿಗುವ ಸಾಧ್ಯತೆಯಿದೆ. ಅದಕ್ಕಿಂತ ಬೆಂಗಳೂರಿನಿಂದ ನೇರವಾಗಿ ಚಿಕ್ಕಬಳ್ಳಾಪುರಕ್ಕೆ ಬಂದು ಅಲ್ಲಿಂದ ದೊಡ್ಡಬಳ್ಳಾಪುರ ಬಸ್ ಹತ್ತಿದರೆ ಮಧ್ಯೆ ನಂದಿ ಬಸ್ ಸ್ಟಾಪ್ ಸಿಗುತ್ತೆ. ಹೀಗೂ ನೀವು ಆದಿಯೋಗಿ ಶಿವನ ಮೂರ್ತಿ ತಲುಪಬಹುದು. ಚಿಕ್ಕಬಳ್ಳಾಪುರದಿಂದಲೂ ಕೇವಲ 9 ಕಿಲೋ ಮೀಟರ್ ದೂರಕ್ಕೆ ಈ ಕ್ಷೇತ್ರ ದೊರೆಯುತ್ತದೆ. ಆದರೆ ಸದ್ಯದ ಮಟ್ಟಿಗೆ ಸದ್ಗುರು ಸನ್ನಿಧಿಗೆ ಖಾಸಗಿ ವಾಹನದಲ್ಲೆ ಆಗಮಿಸೋದೇ ಬೆಸ್ಟ್!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ