Belagavi Farmers Alert: ಬೆಳಗಾವಿ ರೈತರೇ, ರಸಗೊಬ್ಬರ ಬಳಕೆ ಬಗ್ಗೆ ಮಹತ್ವದ ಸೂಚನೆ ತಿಳಿಯಿರಿ
ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಬೆಳಗಾವಿ ಜಿಲ್ಲೆಯ ರೈತರು ತಮ್ಮ ಕೃಷಿ ಸಮಸ್ಯೆ, ಅನುಮಾನ ಅಥವಾ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಇನ್ನೇಕೆ ತಡ? ಈ ಮುಂಗಾರು ಎಲ್ಲ ಕೃಷಿಕರಿಗೂ ಚೆನ್ನಾಗಿರಲಿ, ಆಲ್ ದಿ ಬೆಸ್ಟ್!
ಬೆಳಗಾವಿ: ಜಿಲ್ಲೆಯ ಹಲವೆಡೆ ಮುಂಗಾರು ಮಳೆ ಆರಂಭವಾಗಿದ್ದು, ರೈತರು ವಿವಿಧ ಬೆಳೆಗಳ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಬೆಳಗಾವಿ ಜಿಲ್ಲೆಯ (Belagavi District) ಪ್ರಮುಖ ಬೆಳೆಗಳಲ್ಲಿ ಒಂದಾದ ಗೋವಿನ ಜೋಳದ ಬಿತ್ತನೆ ಕಾರ್ಯವು (Agriculture Activities) ಪ್ರಸ್ತುತ ಪ್ರಾರಂಭವಾಗಿದೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರೈಕೆಗೆ ಕೃಷಿ ಇಲಾಖೆ (Agriculture Department) ಸರ್ವ ಸನ್ನದ್ದಗೊಂಡಿದೆ. ಜಿಲ್ಲೆಯಲ್ಲಿ ಗೋಕಾಕ, ರಾಮದುರ್ಗ, ಬೈಲಹೊಂಗಲ, ಸವದತ್ತಿ, ಬೆಳಗಾವಿ, ಚಿಕ್ಕೋಡಿ, ಅಥಣಿ, ಮೂಡಲಗಿ, ರಾಯಬಾಗ, ಹುಕ್ಕೇರಿ ಭಾಗಗಳಲ್ಲಿ ಹೆಚ್ಚಾಗಿ ಗೋವಿನ ಜೋಳ ಬೆಳೆಯಲಾಗುತ್ತದೆ. ಈ ಭಾಗಗಳಲ್ಲಿ ಬಿತ್ತನೆ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ. ಹಾಗಾದರೆ ಬೆಳಗಾವಿಯ ಬಹುತೇಕ ಭಾಗಗಳಲ್ಲಿ ಬಿತ್ತನೆ ಆರಂಭವಾಗಿರುವ ಗೋವಿನ ಜೋಳಕ್ಕೆ ಎಷ್ಟು ಪ್ರಮಾಣದ ರಸಗೊಬ್ಬರವನ್ನು ಪೂರೈಸಬೇಕು? ಹೇಗೆ ರಸಗೊಬ್ಬರ ಒದಗಿಸಬೇಕು? ಇಲ್ಲಿದೆ ಮಾಹಿತಿ
ವಾಡಿಕೆಯಂತೆ ಜೂನ್ 7 ರಿಂದ ಮುಂಗಾರು ಮಳೆ ಸುರಿಯಲು ಪ್ರಾರಂಭಿಸುತ್ತದೆ. ಆದರೆ ಪ್ರಸ್ತುತ ವರ್ಷ ಮುಂಗಾರು ಮಾರುತಗಳು (Monsoon) ಕೇರಳ ದಾಟಿ ರಾಜ್ಯವನ್ನು ಕಳೆದ ವಾರವೇ ಪ್ರವೇಶಿಸಿವೆ. ಇದರಿಂದ ಮಳೆಗಾಗಿ ಕಾಯ್ದು ಕುಳಿತಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯು ಜೂನ್ ಮೊದಲನೇ ವಾರದಲ್ಲಿಯೇ (Rain Updates) ಸುರಿದಿದೆ. ಇದರಿಂದ ರೈತರು ಬೆಳೆಗಳ ಬಿತ್ತನೆ ಕಾರ್ಯದಲ್ಲಿ ಈಗಾಗಲೇ ತೊಡಗಿದ್ದಾರೆ.
ಗೋವಿನ ಜೋಳ ಬಿತ್ತನೆ ವಿಧಾನ
ಗೋವಿನ ಜೋಳ ಬಿತ್ತನೆಯಲ್ಲಿ ಕೆಲವು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ. ಗೋವಿನ ಜೋಳವನ್ನು 60 ಸೆ.ಮಿ ಅಂತರದ ಸಾಲುಗಳಲ್ಲಿ ಬೀಜದಿಂದ ಬೀಜಕ್ಕೆ 20 ಸೆ.ಮಿ ಅಂತರದಲ್ಲಿ 5 ಸೆ.ಮಿ ಕ್ಕಿಂತ ಹೆಚ್ಚು ಆಳವಿಲ್ಲದಂತೆ ಬೀಜವನ್ನು ಬಿತ್ತಬೇಕು.
ಬಿತ್ತುವ ವೇಳೆ ರಸಗೊಬ್ಬರ ನಿರ್ವಹಣೆ
ಬಿತ್ತನೆಯ ಮೊದಲು ಅಥವಾ ಬಿತ್ತನೆ ಸಮಯದಲ್ಲಿ ಎಕರೆಗೆ 16 ಕೆಜಿ ಯೂರಿಯಾ, 50 ಕೆಜಿ ಡಿಎಪಿ ಹಾಗೂ 25 ಕೆಜಿ ಪೊಟ್ಯಾಷಿಯಮ್ ಒದಗಿಸಬೇಕು. ಇಲ್ಲವೇ ಪರ್ಯಾಯವಾಗಿ ಎಕರೆಗೆ 18 ಕೆಜಿ ಯೂರಿಯಾ ಮತ್ತು 94 ಕೆಜಿ 12:32:16 ರಸಗೊಬ್ಬರದ ಸಂಯುಕ್ತಗಳನ್ನು ಬಳಸಬಹುದು.
ಬೆಳೆಯ ಪ್ರೌಢಾವಸ್ಥೆಯಲ್ಲಿ ರಸಗೊಬ್ಬರ ನಿರ್ವಹಣೆ
ಬಿತ್ತನೆ ಮಾಡಿದ ಮೊದಲ 20, 35, 50, 65 ದಿನಗಳಲ್ಲಿ ಕ್ರಮವಾಗಿ 25, 40, 40, 12 ಕೆ.ಜಿ ರಸಗೊಬ್ಬರವನ್ನು ಪ್ರತಿ ಎಕರೆಗೆ ಮೇಲು ಗೊಬ್ಬರವಾಗಿ ನೀಡಬೇಕು. ಇಲ್ಲವೇ ಪರ್ಯಾಯವಾಗಿ ಭಾರತ ಸರಕಾರದ ಅಂಗಸಂಸ್ಥೆ ಬಿಡುಗಡೆ ಮಾಡಿದ ನ್ಯಾನೋ ಯೂರಿಯಾವನ್ನು 250, 400, 400, 120 ಎಂ.ಎಲ್ನಂತೆ ಪ್ರತಿ ಎಕರೆಗೆ 200 ಲೀಟರ್ ನೀರಿನೊಂದಿಗೆ ಸಿಂಪಡಣೆ ಮಾಡಬಹುದು.
ಇಲ್ಲಿದೆ ರೈತರಿಗೆ ಅಗತ್ಯವಾದ ಸಂಪರ್ಕ ಸಂಖ್ಯೆ ಇದರಿಂದ ಖರ್ಚಿನಲ್ಲಿಯೂ ಮಿತವ್ಯಯವಾಗುವುದರೊಂದಿಗೆ ಯೂರಿಯಾ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಬಹುದಾಗಿದೆ. ಅಲ್ಲದೇ ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಉಪ ಕೃಷಿ ನಿರ್ದೇಶಕರ ಕಾರ್ಯಾಲಯವನ್ನು ಬೆಳಗಾವಿ ಜಿಲ್ಲೆಯ ರೈತರು ಸಂಪರ್ಕಿಸಬಹುದಾಗಿದೆ. ಸಂಪರ್ಕ ಸಂಖ್ಯೆ ಇಲ್ಲಿದೆ.
ಬೆಳಗಾವಿ ಉಪ ಕೃಷಿ ನಿರ್ದೇಶಕರ ಕಾರ್ಯಾಲಯದ ದೂರವಾಣಿ ಸಂಖ್ಯೆ: 0831-2407233
ಇ-ಮೇಲ್ ವಿಳಾಸ: dda1bgm@gmail.com
ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಬೆಳಗಾವಿ ಜಿಲ್ಲೆಯ ರೈತರು ತಮ್ಮ ಕೃಷಿ ಸಮಸ್ಯೆ, ಅನುಮಾನ ಅಥವಾ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಇನ್ನೇಕೆ ತಡ? ಈ ಮುಂಗಾರು ಎಲ್ಲ ಕೃಷಿಕರಿಗೂ ಚೆನ್ನಾಗಿರಲಿ, ಆಲ್ ದಿ ಬೆಸ್ಟ್!