Ashwathama Temple: ದೇಶದಲ್ಲೇ ಅಪರೂಪದ ಅಶ್ವತ್ಥಾಮ ದೇಗುಲ ಕರ್ನಾಟಕದಲ್ಲಿದೆ! ಬನ್ನಿ, ದರ್ಶನ ಪಡೆಯಿರಿ
ಮಹಾಭಾರತದ ಅಶ್ವತ್ಥಾಮನ ಪಾತ್ರವನ್ನು ನಾವೆಲ್ಲ ಕೇಳಿರುತ್ತೇವೆ, ಓದಿರುತ್ತೇವೆ. ಆದರೆ ಅಶ್ವತ್ಥಾಮನಿಗೂ ದೇವಸ್ಥಾನ ಇದೆ ಎಂಬ ವಿಷಯ ನಿಮಗೆ ಗೊತ್ತಿರಲ್ಲ. ಹೌದು, ಅಶ್ವತ್ಥಾಮ ದೇಗುಲವಿದೆ, ಅದೂ ನಮ್ಮ ಕರ್ನಾಟಕದ ಬೆಳಗಾವಿಯಲ್ಲೇ! ಮುಂದೆ ಓದಿ.
ಬೆಳಗಾವಿ: ದೇಶದ ವಿವಿಧ ಪ್ರದೇಶಗಳಲ್ಲಿ ಸಿನಿಮಾ ನಟರು, ರಾಜಕೀಯ ನಾಯಕರಿಗೂ ದೇಗುಲ ನಿರ್ಮಾಣ ಮಾಡಿದ ಸುದ್ದಿ ಕೇಳಿರುತ್ತೀರಿ. ದೇವರ ಜೊತೆಗೆ ತಮ್ಮ ತಮ್ಮ ಆರಾಧ್ಯ ದೈವಗಳಿಗೂ ದೇಗುಲ ಕಟ್ಟುವ ಪುಣ್ಯಾತ್ಮರಿದ್ದಾರೆ. ಇದರ ನಡುವೆ ಬೆಳಗಾವಿಯ ಪಾಂಗುಳಗಲ್ಲಿಯಲ್ಲಿರುವ ದೇಶದ ಅಪರೂಪದ ಅಶ್ವತ್ಥಾಮ ದೇವಾಲಯ (Ashwathama Temple) ಸದ್ದುಗದ್ದಲಗಳಿಲ್ಲದೇ ಭಕ್ತ ಜನರ ಶ್ರದ್ಧೆಯ ಮಧ್ಯೆ ಗಮನಸೆಳೆಯುತ್ತಿದೆ. ಉತ್ತರ ಭಾರತದ ಕೆಲವೆಡೆ ಮಾತ್ರ ಬೆರಳೆಣಿಕೆಯ ಸಂಖ್ಯೆಯಲ್ಲಿ ಇದೆ ಎನ್ನಲಾಗಿದ್ದರೂ ಅಶ್ವತ್ಥಾಮ ದೇಗುಲ ನಿಜಕ್ಕೂ ಅಪರೂಪ. ಕರ್ನಾಟಕದಲ್ಲಿ ಬೆಳಗಾವಿ (Belagavi) ಹೊರತುಪಡಿಸಿದರೆ ಇನ್ನೆಲ್ಲೂ ಅಶ್ವತ್ಥಾಮ ದೇಗುಲವಿಲ್ಲ ಎನ್ನಲಾಗಿದೆ.
ಸುಮಾರು 200 ವರ್ಷಗಳಿಗೂ ಹೆಚ್ಚು ಇತಿಹಾಸವುಳ್ಳ ದೇಗುಲ ಇದಾಗಿದೆ. ಇಷ್ಟಕ್ಕೂ ಈ ಅಶ್ವತ್ಥಾಮ ಯಾರು ಎಂದುಕೊಂಡಿರಾ? ಮಹಾಭಾರತದ ದ್ರೋಣಾಚಾರ್ಯರ ಪುತ್ರ, ಏಳು ಜನ ಚಿರಂಜೀವಿಗಳಲ್ಲೊಬ್ಬನೆನಿಸಿದ ಅಶ್ವತ್ಥಾಮ ಇಲ್ಲಿ ಪೂಜೆಯ ಮೂರ್ತಿ ಸ್ವರೂಪ.
ದೊಡ್ಡ ಭಕ್ತಗಣ
ವರ್ಷದ ಹೋಳಿ ಹಬ್ಬಕ್ಕೊಮ್ಮೆ ವಿಶೇಷ ಆಚರಣೆಗಳನ್ನು ಆಚರಿಸಲಾಗುವ ಈ ಪುಟ್ಟ ದೇಗುಲ ದೊಡ್ಡ ಭಕ್ತಗಣವನ್ನೇ ಹೊಂದಿದ್ದು ನಂಬಿಕೆ, ಶೃದ್ಧೆಗಳ ಕೇಂದ್ರವಾಗಿ ಮುನ್ನಡೆದಿದೆ. ಹೋಳಿ ಹಬ್ಬ ಬಂದಾಕ್ಷಣ ಬಹುಸಂಸ್ಕೃತಿಯ ನಗರ ಕುಂದಾನಗರದಲ್ಲಿ ಬೆಳಗಾದರೆ ಸಾಕು, ರಂಗುರಂಗಿನ ಆಟ ಎಲ್ಲರ ಕೈಯ್ಯಲ್ಲೂ ವಿವಿಧ ರೀತಿಯ ಬಣ್ಣದ ಪುಡಿ, ಬಣ್ಣದ ನೀರನ್ನು ಸಿದ್ಧಪಡಿಸಿ ಜನರ ಮೇಲೆ ಎರಚಲು ಲೇಲೆ ಮೈದಾನದಲ್ಲಿ ಜನ ನೆರೆದಿರುತ್ತಾರೆ. ಉತ್ಸಾಹ ಮುಗಿಲಿಗೇರುವಂತೆ ಜನರು ಬಣ್ಣದ ರಂಗುರಂಗಿನ ಹೋಳಿ ಹಬ್ಬಕೆ ಕೈಜೋಡಿಸಲು ಎಲ್ಲೆಡೆ ಉತ್ಸಾಹಿಗಳಾಗಿರುತ್ತಾರೆ. ಇನ್ನೊಂದಡೆ ಕುಂದಾನಗರಿಯ ಪಾಂಗುಳ ಗಲ್ಲಿಯಲ್ಲಿ ಈ ಚಿರಂಜೀವಿ ಅಶ್ವತ್ಥಾಮದ ದೇಗುಲದಲ್ಲಿ ತನ್ನದೇ ಆದ ರೀತಿಯ ಆಚರಣೆಗಳು ತೆರೆದುಕೊಳ್ಳುತ್ತವೆ.
ಹೋಳಿ ರಂಗು!
ಅದ್ಧೂರಿ ತಯಾರಿ
ಹೋಳಿ ಹಬ್ಬದ ನಿಮಿತ್ತ ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ಮಂದಿರಕ್ಕೆ ಅತಿ ವಿಜೃಂಭಣೆ ತಯಾರಿ ನಡೆಯುತ್ತಿದೆ. ಬಾಳೆ ಎಲೆಗಳು, ಲೈಟಿಂಗ್ ಸರಗಳಿಂದ ಕಂಗೊಳಿಸುತ್ತಿದೆ. ಸುಮಾರು 200 ವರ್ಷಗಳ ಇತಿಹಾಸ ಇರುವ ಅಶ್ವತ್ಥಾಮ ಮಂದಿರದಲ್ಲಿ ಹೋಳಿ ಹಬ್ಬದ ದಿನದಂದು ಬೆಳಗಿನ ಜಾವ 5 ಕ್ಕೆ ಅಶ್ವತ್ಥಾಮ ಮಂದಿರದಲ್ಲಿ ಪೂಜೆ ನೆರವೇರಿಸಿ ನಂತರ ಬಣ್ಣ ಹಬ್ಬವನ್ನು ಆಚರಿಸಲಾಗುತ್ತದೆ.
ಅಶ್ವತ್ಥಾಮ ದೇಗುಲಕ್ಕೆ ಹೀಗೆ ತೆರಳಬಹುದು (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)[/caption]
ಮಧ್ಯಾಹ್ನ 12 ರಿಂದ 2ರವರೆಗೆ ಸುಮಾರು 5 ಸಾವಿರಕ್ಕಿಂತ ಹೆಚ್ಚು ಸಾರ್ವಜನಿಕರು ಪಾಂಗುಳ ಗಲ್ಲಿಯಲ್ಲಿರುವ ಜೈನ್ ಮಂದಿರದಿಂದ ಅಶ್ವತ್ಥಾಮ ಮಂದಿರವರೆಗೆ ಭಕ್ತರು ಉರುಳು ಸೇವೆ ಮಾಡಿ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ.
ಉರುಳು ಸೇವೆ ನೀಡಲು ಸರತಿ ಸಾಲು!
ಈ ಆಚರಣೆ ಮೊದಲು ಪಾಂಗುಳ ಗಲ್ಲಿಯಲ್ಲಿ ಮಾತ್ರ ನಡೆಯುತಿತ್ತು. ನಂತರ ಭಕ್ತರ ಬೇಡಿಕೆಗಳು ಈಡೇರಿಕೆಯಾದಂತೆ ಬೆಳಗಾವಿ ಸುತ್ತಮುತ್ತನಲ್ಲಿರುವ ಜನರೆಲ್ಲರೂ ಹೋಳಿ ಹಬ್ಬದ ನಿಮಿತ್ತ ಈ ದೇವಸ್ಥಾನದ ಮುಂದೆ ಉರುಳು ಸೇವೆ ಮಾಡಲು ನಾಮುಂದೆ ತಾಮುಂದೆ ಎನ್ನುವ ರೀತಿಯ ಸರದಿಯಲ್ಲಿ ಸಾರ್ವಜನಿಕರು ಸಾಲು ಸಾಲಲ್ಲಿ ನಿಂತಿರುತ್ತಾರೆ.
ಉರುಳು ಸೇವೆ ಮಾಡಲು ನಾಮುಂದು, ತಾಮುಂದು ಎನ್ನುತ್ತಿರುವ ಭಕ್ತಾದಿಗಳು
ಈ ಉರುಳು ಸೇವೆ ಹೋಳಿ ಹಬ್ಬದ ದಿನದಂದು ಮಾತ್ರ ಇರುವದರಿಂದ ಇದು ಕುಂದಾನಗರಿಯಲ್ಲಿ ಒಂದು ವಿಶೇಷವಾಗಿದೆ. ಉಳಿದ ಸಮಯಗಳಲ್ಲೂ ಇಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಇಲ್ಲಿ ದೀಪಕ್ಕೆ ಎಣ್ಣೆ ಹಾಕಿ ಅದನ್ನು ಹಚ್ಚಿಕೊಂಡರೆ ಗಾಯಗಳು, ಕಜ್ಜಿ ಇತ್ಯಾದಿಗಳು ಬೇಗ ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಹೀಗಾಗಿ ಭಕ್ತರು ಇಲ್ಲಿ ಅಶ್ವತ್ಥಾಮನ ಮೊರೆ ಹೋಗುತ್ತಾರೆ.