ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು (Mysuru) ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ (Suttur) ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಜನವರಿ 23ರವರೆಗೆ ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗದ್ದುಗೆ ಮಠದ ಆವರಣದಲ್ಲಿ ಜ. 18ರಂದು ಈ ಜಾತ್ರೆ (Jatra) ಪ್ರಾರಂಭವಾಗಿದ್ದು, ಪೂಜಾ ಕಾರ್ಯಕ್ರಮಗಳು ಹಾಗೂ ವಿಶೇಷ ಸಮಾರಂಭಗಳು ವಿಜೃಂಭಣೆಯಿಂದ ಜರುಗಲಿದೆ. ಜನವರಿ 18 ರಂದು ಸುತ್ತೂರು ಮಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಮಠಗಳ ಮಠಾಧೀಶರು ಸಹ ಭಾಗವಹಿಸಿದ್ದರು.
ಸುತ್ತೂರು ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ವಿವರಗಳನ್ನು ಜಾತ್ರಾ ಸಮಿತಿ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಅವರು ಹಂಚಿಕೊಂಡಿದ್ದಾರೆ. ಈ ಸುತ್ತೂರು ಜಾತ್ರಾ ಮಹೋತ್ಸವವು ಬಹಳ ಜನಪ್ರಿಯ ಕಾರ್ಯಕ್ರಮವಾಗಿದ್ದು ನಾಡಿನಾದ್ಯಂತದಿಂದ ಭಕ್ತಾದಿಗಳು ಜಾತ್ರೆಯಲ್ಲಿ ಭಾಗವಹಿಸಲು ಬರುತ್ತಾರೆ.
ಈ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಆ ಪ್ರದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ತೋರಿಸುವ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ. ಕೃಷಿ ಹಾಗೂ ವಿವಿಧ ರೀತಿಯ ವಸ್ತುಪ್ರದರ್ಶನ, ವಿಚಾರ ಕಾರ್ಯಾಗಾರಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸುತ್ತೂರು ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ.
ಮಂಗಳವಾರ ಬೆಳಗ್ಗೆ ಸುತ್ತೂರು ಮಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಹಾ ದಾಸೋಹದ ಆವರಣದಲ್ಲಿರುವ ಅಡುಗೆ ಮನೆಯಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದ್ದು, ಜನವರಿ 18ರಂದು ಜಾತ್ರಾ ಮಹೋತ್ಸವ ಉದ್ಘಾಟನೆ ಈ ದಿನವೇ ಉತ್ಸವ ಮೂರ್ತಿಯನ್ನು ಶ್ರೀ ಮಠದಿಂದ ಕರ್ತೃಗದ್ದುಗೆಗೆ ತರಲಾಗುತ್ತದೆ.
ಎರಡನೇ ದಿನ ಅಂದರೆ ಜನವರಿ 19ರಂದು ಹಾಲಹರವಿ ಉತ್ಸವ ಹಮ್ಮಿಕೊಳ್ಳಲಾಗಿದ್ದು,ಇನ್ನು ಪ್ರತಿವರ್ಷದಮಥೆ ಜಾತ್ರೆಯ ಅಂಗವಾಗಿ
ಉಚಿತ ಸಾಮೂಹಿಕ ವಿವಾಹ ನಡೆಯಲಿದೆ.
ಇದನ್ನೂ ಓದಿ: ದೇವರ ಕೋಣೆಯಲ್ಲಿ ಅಪ್ಪಿ-ತಪ್ಪಿ ಈ ವಿಗ್ರಹಗಳನ್ನು ಇಡಬೇಡಿ, ಕಷ್ಟ ತಪ್ಪಿದ್ದಲ್ಲ
ಮೂರನೇ ದಿನ ಅಂದರೆ ಜನವರಿ 20 ರಂದು ಬೆಳಗ್ಗೆ 10 ಗಂಟೆಗೆ ಜಾತ್ರೆಯ ರಥೋತ್ಸವ ನಡೆಯಲಿದ್ದು, ಇದರ ನಂತರ ಗ್ರಾಮೀಣ ಕ್ರೀಡೆಗಳು ಸೇರಿದಂತೆ ವಿವಿಧ ರೀತಿಯ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಗೊಬ್ಬರದ ಮೂಟೆ ಹೆಗಲ ಮೇಲೆ ಹೊತ್ತು ಓಡುವ ಆಟಗಳು ನಡೆಯಲಿದೆ ಎಂದು ಜಾತ್ರೆ ಸಮಿತಿ ಮಾಹಿತಿ ನೀಡಿದೆ.
ಜಾತ್ರೆಯಲ್ಲಿ ಗ್ರಾಮೀಣ ಆಟಗಳನ್ನು ಆಡುವುದು ಸುತ್ತೂರಿನಲ್ಲಿ ದಶಕಗಳಿಂದ ಒಂದು ಶ್ರೀಮಂತ ಸಂಪ್ರದಾಯದಂತೆ ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮೀಣ ಆಟಗಳನ್ನು ಮುಂದಿನ ಪೀಳಿಗೆಗೆ ಧಾಟಿಸುವುದು ಮತ್ತು ನಗರವಾಸಿ ಜನರಿಗೆ ಈ ಆಟಗಳನ್ನು ಪರಿಚಯಿಸುವುದು ಈ ಸಂಪ್ರದಾಯದ ಉದ್ದೇಶ.
ಇದೇ ಕಾರಣಕ್ಕೆ ರಾಜ್ಯದಲ್ಲೇ ಪ್ರಸಿದ್ಧ ಜಾತ್ರೆ ಎಂದು ಕೊಂಡಾಡಲ್ಪಡುವ ಸುತ್ತೂರು ಜಾತ್ರೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಅಲ್ಲದೆ, ರಾಜ್ಯದ ಪ್ರಮುಖ ಜಾತ್ರೆಗಳಲ್ಲೊಂದಾಗಿ ಸ್ಥಾನ ಪಡೆದುಕೊಂಡಿದೆ ಎಂದರೂ ತಪ್ಪಾಗಲಾರದು.
ಜಾತ್ರಾ ಮಹೋತ್ಸವದಲ್ಲಿ ನಿತ್ಯವೂ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಜಾತ್ರೆಯ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ.
ದನಗಳ ಜಾತ್ರೆ ರದ್ದು
ಇನ್ನು ಪ್ರತಿವರ್ಷ ಈ ಜಾತ್ರೆಯಲ್ಲಿ ನಡೆಯುವ ದನಗಳ ಜಾತ್ರೆಯನ್ನು ಈ ವರ್ಷ ರದ್ದು ಮಾಡಲಾಗಿದ್ದು, ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆ ಈ ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ: ಒಂದು ತಿಂಗಳ ಮಟ್ಟಿಗೆ 3 ರಾಶಿಯವರು ಬಹಳ ಎಚ್ಚರದಿಂದಿರಿ, ಹಣ ಕಳೆದುಕೊಳ್ಳೋದು ಗ್ಯಾರಂಟಿ
ಸುಮಾರು 53 ವರ್ಷಗಳಿಂದ ಈ ಕಾರ್ಯಕ್ರಮದಲ್ಲಿ ದನಗಳ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದ್ದು, ಈ ವರ್ಷ ಸುರಕ್ಷತೆಯ ದೃಷ್ಟಿಯಿಂದ ಜಾತ್ರೆ ರದ್ದು ಮಾಡಲಾಗಿದೆ ಎಂದು ಸಮಿತಿ ಮಾಹಿತಿ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ