- News18 Kannada
- Last Updated: April 21, 2021, 5:21 PM IST
ಬೆಂಗಳೂರು: ದೇಶ ಮತ್ತು ರಾಜ್ಯ ಕೊರೋನಾ ಸಂಕಷ್ಟದಲ್ಲಿ ಇದೆ. ಈ ಸಮಯದಲ್ಲಿ ಪ್ರಧಾನಿ ಮತ್ತು ಸಿಎಂ ಗೈಡ್ ಲೈನ್ ಹೊರಡಿಸಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಆಗಬಾರದು. ನಾನು ರಾಜ್ಯದಲ್ಲಿರುವ ಹಲವು ಕಂಪನಿಗಳ ಜೊತೆ ಮಾತಡಿದ್ದೀನಿ. ಜಿಂದಾಲ್ ಸೇರಿದಂತೆ ರಾಜ್ಯದ ಹಲವು ಕಂಪನಿಗಳ ಜೊತೆ ಮಾತಡಿದ್ದೀನಿ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಆಗಬಾರದು. ರಾಜ್ಯದಲ್ಲಿ ಕೋವಿಡ್ ಹೆಚ್ಚಾಗುತ್ತಿದೆ. ರಾಜ್ಯಕ್ಕೆ ಆಕ್ಸಿಜನ್ ಕೊರತೆ ಕಂಡುಬಂದಿದೆ. ಪ್ರಸ್ತುತ ಜಿಂದಾಲ್ ನಿಂದ 400 ಟನ್ ಆಕ್ಸಿಜನ್ ಸಿಗುತ್ತಿದೆ. ಬೇರೆ ಸ್ಟೀಲ್ ಪ್ಲಾಂಟ್ ನವರಿಂದ 200 ಟನ್ ಸಿಗಲಿದೆ. ಒಟ್ಟು 600 ಟನ್ ಪ್ರತಿದಿನ ಆಕ್ಸಿಜನ್ ಸಿಗಲಿದೆ. ನಮ್ಮ ರಾಜ್ಯಕ್ಕೆ ಪ್ರತಿದಿನಕ್ಕೆ 600 ಟನ್ ಆಕ್ಸಿಜನ್ ಸಾಕಾಗಲಿದೆ ಎಂದು ಗಣಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ ಅವರು, ಬಲ್ಡೋಟಾ ಗಣಿ ಕಂಪನಿ ಬಂದ್ ಮಾಡಿದ್ದಾರೆ. ಈಗ ಅನಿವಾರ್ಯವಾಗಿ ನಮಗೆ ಆಕ್ಸಿಜನ್ ಬೇಕಾಗಿದೆ. ಹಾಗಾಗಿ ಅವರಿಗೆ ಮರುಪ್ರಾರಂಭಿಸುವಂತೆ ಸೂಚಿಸಿದ್ದೇವೆ. ಪ್ರಸ್ತುತ ಸಿಗುತ್ತಿದ್ದ ಆಕ್ಸಿಜನ್ ಕೈಗಾರಿಕೆಗೆ ಸಾಕಾಗುತ್ತಿತ್ತು. ಜೆಎಸ್ಡಬ್ಲ್ಯೂ ಸ್ಟೀಲ್ ಕಂಪನಿ ಜೊತೆ ಜೊತೆ ಸಭೆ ನಡೆಸಲಾಗಿದೆ. ಬೇರೆ ಸ್ಟೀಲ್ ಕಂಪನಿಗಳ ಜೊತೆಯೂ ಸಭೆ ಮಾಡಿದ್ದೇವೆ. ಆಕ್ಸಿಜನ್ ಪ್ರೊಡಕ್ಟ್ ಮಾಡೋಕೆ ಅವರಿಗೆ ತಿಳಿಸಿದ್ದೇವೆ. ಪ್ರಸ್ತುತ ನಮಗೆ 600 ಟನ್ ಆಕ್ಸಿಜನ್ ಬೇಕು. ಪೇಶೆಂಟ್ ಹೆಚ್ಚಾದರೆ ಅದರ ಪ್ರಮಾಣವೂ ಹೆಚ್ಚಾಗಲಿದೆ. ಇದರ ಬಗ್ಗೆ ನನಗೆ ನಿಖರ ಮಾಹಿತಿಯಿಲ್ಲ. ಆರೋಗ್ಯ ಸಚಿವರ ಜೊತೆ ಚರ್ಚಿಸಬೇಕು. ನಾನೇ ಖುದ್ದು ಅಕ್ಸಿಜನ್ ವಿಚಾರದಲ್ಲಿ ಮುಂದೆ ಬಂದಿದ್ದೇನೆ. ಮುಂದೆ ಬಂದು ಸ್ಟೀಲ್ ಕಂಪನಿಗಳ ಜೊತೆ ಚರ್ಚಿಸಿದ್ದೇನೆ ಎಂದು ಹೇಳಿದರು.
ಇದನ್ನು ಓದಿ: ಚಿತಾಗಾರದ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವ ಆ್ಯಂಬುಲೆನ್ಸ್: ಆಡಳಿತ ವೈಫಲ್ಯ ಒಪ್ಪಿಕೊಂಡರೇ ಬಿಬಿಎಂಪಿ ಕಮಿಷನರ್.!?
ಚಿಕ್ಕಬಳ್ಳಾಪುರ, ಶಿವಮೊಗ್ಗ ಸ್ಪೋಟ ಪ್ರಕರಣಗಳ ನಂತರ ಮೈನಿಂಗ್ ಕಂಪನಿಗಳ ಲೈಸನ್ಸ್ ಹಾಗೂ ದಂಡಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ. ಡಿಜಿಎಂಎಸ್ ಲೈಸೆನ್ಸ್ ತೆಗೆದುಕೊಳ್ಳುವುದಕ್ಕೆ 90 ದಿನಗಳ ಕಾಲ ಅವಕಾಶ ನೀಡಿದ್ದೆವು. ಇಡೀ ಕರ್ನಾಟಕದಲ್ಲಿ ಇಲ್ಲೀಗಲ್ ಮೈನಿಂಗ್ ಗಳಿಗೆ ಡ್ರೋಣ್ ಸರ್ವೆ ಮಾಡಿ ದಂಡ ವಿಧಿಸಲಾಗಿತ್ತು. 6000 ಕೋಟಿ ಯಷ್ಡು ದೊಡ್ಡ ಮೊತ್ತದ ದಂಡ ವಿಧಿಸಲಾಗಿತ್ತು. ಆದರೆ ಗಣಿ ಮಾಲೀಕರು ಈ ದಂಡ ಐದು ಪಟ್ಟು ಹೆಚ್ಚಾಗಿದೆ ಅಂತ ಕೋರ್ಟ್ ಗೆ ಹೋಗಿದ್ದರು. 2000ಕ್ಕೂ ಹೆಚ್ಚು ಗಣಿಗಾರಿಕೆಗಳು ಕ್ಲೋಸ್ ಆಗಿದ್ದವು. ಹೀಗಾಗಿ ಒಂದು ಪಟ್ಟು ದಂಡ ವಿಧಿಸುವುದಕ್ಕೆ ಮಾತ್ರ ಈಗ ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಚಿವರುಗಳು ಆಕ್ಟಿವ್ ಆಗಿಲ್ಲ ಎಂಬ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲರೂ ಆಕ್ಟಿವ್ ಆಗಿ ಕೆಲಸ ಮಾಡ್ತಿದಾರೆ. ನಾವೂ ಎಲ್ಲ ಸಹೋದ್ಯೋಗಿ ಸಚಿವರಲ್ಲಿ ಸ್ನೇಹಪೂರ್ವಕವಾಗಿ ವಿನಂತಿ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ಕೊರೋನಾ ವಿರೋಧವಾಗಿ ಹೋರಾಟ ಮಾಡೋಣ. ವಿಪಕ್ಷ ದವರೂ ಕೂಡಾ ಈ ವಿಚಾರದಲ್ಲಿ ನಮ್ಮ ಜೊತೆ ಕೈ ಜೋಡಿಸಿ ಕೆಲಸ ಮಾಡಬೇಕು ಎಂದರು.