- News18 Kannada
- Last Updated: April 21, 2021, 8:33 PM IST
ಕೋವಿಡ್ ಸಾಂಕ್ರಾಮಿಕದ ವಿರುದ್ಧ ಇಡೀ ದೇಶದ ನಾಗರಿಕರು ಹೋರಾಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳು ಸರ್ಕಾರದ ಪ್ರಯತ್ನಗಳಿಗೆ ಕೈ ಜೋಡಿಸಿದೆ. ಆದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಾ ಈ ಹೋರಾಟದಿಂದ ಹೊರಗುಳಿದಿದ್ದಾರೆ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಟೀಕಿಸಿದ್ದಾರೆ. ದೇಶದಲ್ಲಿ ಸೋಂಕು ಹೆಚ್ಚುತ್ತಿದ್ದು, ಇದಕ್ಕೆ ಕೇಂದ್ರದ ವೈಫಲ್ಯ ಕಾರಣ ಎಂಬ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿರುವ ಸಂಸದರು, ಸೋಂಕು ನಿಯಂತ್ರಣಕ್ಕೆ ಸರ್ಕಾರ ಸೇರಿದಂತೆ ಪ್ರತಿಯೊಬ್ಬರು ಕೈ ಜೋಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಲಸಿಕೆ ಬಗ್ಗೆ ಈ ಹಿಂದೆ ಟೀಕಿಸಿದ್ದ ರಾಹುಲ್ ಗಾಂಧಿ, ಸರ್ಕಾರ ಲಸಿಕೆ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದೆ. ಲಸಿಕೆ ಬಗ್ಗೆ ದುರ್ಬಲ ವರ್ಗದವರಿಗೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಟೀಕಿಸಿದ್ದರು.
ಮೇ. 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡುವ ಕುರಿತು ಸರ್ಕಾರದ ಘೋಷಣೆ ಬಳಿಕವೂ ಕೇಂದ್ರ ಸರ್ಕಾರದ ಮೇಲೆ ಟೀಕಾ ಪ್ರಹಾರ ನಡೆಸಿದರು. ಆಕ್ಸಿಜನ್ ಕೊರತೆಯಿಂದಾಗಿ ಅಪಾರ ಜನ ಸಾವನ್ನಪ್ಪುತ್ತಿದ್ದರೆ, ಮತ್ತಷ್ಟು ಜನ ಕನಿಷ್ಟ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಮತ್ತು ಔಷಧಿ ಕೊರತೆಯಿಂದಾಗಿ ನೋವಿನಲ್ಲಿ ನರಳುತ್ತಿದ್ದಾರೆ. ಕೆಲವರು ತಮ್ಮ ಪ್ರೀತಿ ಪಾತ್ರರನ್ನು ಕಳೆದು ದುಃಖದ ಮಡುವಿನಲ್ಲಿದ್ದಾರೆ. ಆದರೆ ಬಿಜೆಪಿ ನಾಯಕರು ಮಾತ್ರ ಬೃಹತ್ ಚುನಾವಣಾ ರ್ಯಾಲಿಗಳನ್ನು ನಡೆಸುತ್ತಾ ವೇದಿಕೆಯಲ್ಲಿ ಜೋಕ್ ಮಾಡಿಕೊಂಡು ನಗುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ಈ ಹಿನ್ನಲೆ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ರಾಥೋಡ್, ಕಾಂಗ್ರೆಸ್ ಅಧಿಕಾರಿದಲ್ಲಿರುವ ರಾಜಸ್ಥಾನದ ಸರ್ಕಾರದಲ್ಲಿ ಯಾವ ರೀತಿ ನಿಯಂತ್ರಣ ನಡೆದಿದೆ ಎಂದು ಪ್ರಶ್ನಿಸಿದ್ದಾರೆ. ರಾಜಸ್ಥಾನದಲ್ಲಿ ಬೆಡ್, ಔಷಧ ಸಮಸ್ಯೆ ತಲೆದೂರಿದೆ. ಮಾರುಕಟ್ಟೆಯೇ ಸ್ತಬ್ಧವಾಗಿರುವಾಗ ಮದ್ಯ ಮಾರಾಟ ಬಹಿರಂಗವಾಗಿದೆ ಇದು ಸೋಂಕು ನಿಯಂತ್ರಣ ಮಾಡುತ್ತಿರುವ ರಾಜಸ್ಥಾನ ಸರ್ಕಾರದ ತಯಾರಿ ಎಂದು ಹೀಗಳೆದಿದ್ದಾರೆ.